ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಕ್ರೀಡೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಜ. 11 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಗಾಣಿಗರ ಸಂಘದ ಅಧ್ಯಕ್ಷ ಭುವನೇಶ್ ಮೊಗರ್ನಾಡು ಅವರು ತಾಲೂಕು ಗಾಣಿಗರ ಸೇವಾ ಸಂಘ ಸಹಿತ ಗಾಣಿಗ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಫೆ.1ರಂದು ಬೆಳಿಗ್ಗೆ ಗಂಟೆ 8.30 ರಿಂದ ಅವಿಭಜಿತ ಜಿಲ್ಲಾ ಮಟ್ಟದ ‘ಗಾಣಿಗ ಕ್ರೀಡೋತ್ಸವ’ ನಡೆಯಲಿದೆ ಎಂದರು.

ಅಂದು ಬೆಳಿಗ್ಗೆ ಗಂಟೆ 8.30ಕ್ಕೆ ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ಕ್ರೀಡೋತ್ಸವ ಉದ್ಘಾಟಿಸಲಿದ್ದು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ ನಾಯ್ಕ್ ಉಳಿಪ್ಪಾಡಿ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ ಗಾಣಿಗ, ಉದ್ಯಮಿ ಬಿ.ರಘುನಾಥ ಸೋಮಯಾಜಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಗೌರವಾಧ್ಯಕ್ಷ ನರ್ಸಪ್ಪ ಅಮೀನ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ವೇದವ ಗಾಣಿಗ, ಕೋಶಾಧಿಕಾರಿ ವೇದವ ಗಾಣಿಗ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ನಿವೃತ್ತ ಶಿಕ್ಷಕ ಬಾಲಕೃಷ್ಣ ಮಾಸ್ತರ್, ಕೃಷ್ಣಪ್ಪ ಕೆಮ್ಮನಾಜೆ, ಸಚಿನ್ ಮೆಲ್ಕಾರ್, ನವೀನ್ ಮೊಗರ್ನಾಡ್, ಸಂದೀಪ್ ಮಾರ್ನಬೈಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




