Breaking
21 Mar 2026, Sat

ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಪಾತ್ರ ಅತ್ಯಮೂಲ್ಯವಾದದ್ದು -ಸುಧಾಕರ್ ಭಟ್

ಕಲ್ಲಡ್ಕ : ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಪಾತ್ರ ಅತ್ಯಮೂಲ್ಯವಾಗಿದ್ದು, ಏಮಾಜೆ ಶಾಲೆಯ ಯಶಸ್ಸಿನ ಪಥದಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರ ಶ್ರಮವು ಶ್ಲಾಘನೀಯ ಎಂದು ಮಾಣಿ ಕ್ಲಸ್ಟರ್ ಸಿ. ಆರ್. ಪಿ ಸುಧಾಕರ್ ಭಟ್ ಹೇಳಿದರು.

ಅವರು ಡಿ.30ರಂದು ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ದ. ಕ. ಜಿ. ಪಂ. ಕಿ. ಪ್ರಾ. ಶಾಲೆ ಏಮಾಜೆಯಲ್ಲಿ ನಡೆದ “ಪ್ರತಿಭಾ ಸಂಭ್ರಮ” ಹಾಗೂ “ಅಕ್ಷರ ರತ್ನ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ, ಕಾರ್ಯಕ್ರಮ ಉದ್ಘಾಟಿಸಿದರು.

ಕಳೆದ ಶೈಕ್ಷಣಿಕ ವರ್ಷದಿಂದ, ಶಾಲಾವತಿಯಿಂದ ಕೊಡ ಮಾಡುತ್ತಿರುವ “ಅಕ್ಷರ ರತ್ನ” ಪುರಸ್ಕಾರವನ್ನು ಎಸ್. ಡಿ. ಎಂ ಸಿ ಸಮಿತಿಯ ನಿಕಟ ಪೂರ್ವ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು. ಹಾಗೂ ಪ್ರತಿಭಾ ಕಾರಂಜಿ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವರ್ಷ ಹಾಗೂ ಶ್ಲೋಕ್ ರೈ ಬಿ, ಶಾಲಾಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಹಳೆ ವಿದ್ಯಾರ್ಥಿ ಹರೀಶ್ ಪೂಜಾರಿ ಮೆಕ್ಸಿಕೋ ಹಾಗೂ ನಾಗೇಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಕಲಿಕೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಪೋಷಕರಿಗೆ ನಡೆಸಿದ ವಿಶೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಮಿತ ಡಿ ಪೂಜಾರಿ, ಸದಸ್ಯರಾದ ಶಕೀಲಾ ಕೃಷ್ಣ ಮಿತ್ತಕೋಡಿ, ಧನಂಜಯ ಗೌಡ, ನಿವೃತ್ತ ಪ್ರಾಂಶುಪಾಲರಾದ ಶ್ರೀ ಜಯರಾಮ್ ರೈ, ಎಸ್‌ ಡಿ ಎಂ ಸಿ ಉಪಾಧ್ಯಕ್ಷರಾದ ಹರೀಶ್ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ಕೆ ಎಸ್ ಶಾಲಾ ವರದಿ ವಾಚಿಸಿದರು. ಗೌರವ ಶಿಕ್ಷಕಿ ಐಸಮ್ಮ ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂತು.

Leave a Reply

Your email address will not be published. Required fields are marked *