ಉಡುಪಿ: ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯುತಿದ್ದ ನೇಮೋತ್ಸವದ ವೇಳೆ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ ಮೂವರು ಮಹಿಳೆಯರನ್ನು ಪಡುಬಿದ್ರೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀತಲ್, ಕಾಳಿಯಮ್ಮ ಹಾಗೂ ಮಾರಿ ಎಂದು ಗುರುತಿಸಲಾಗಿದೆ.

ಗರ್ಭ ಗುಡಿಯ ಮುಂದೆ ಕುಳಿತಿದ್ದ ವೃದ್ಧೆಯನ್ನು ಎಬ್ಬಿಸೋಕೆ ಪ್ರಯತ್ನ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ವೃದ್ಧೆ ಎದ್ದು ನಿಂತಿದ್ದು, ಈ ಸಂದರ್ಭದವನ್ನು ಉಪಯೋಗಿಸಿಕೊಂಡ ಮೂವರು ಕಳ್ಳಿಯರು ಆಕೆಯನ್ನು ಒಂದು ಬದಿಗೆ ದೂಡಿಕೊಂಡು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು.

ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅದರ ಆಧಾರದ ಮೇಲೆ ಮಹಿಳೆಯರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನವಾದ ಚಿನ್ನದ ಸರದ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.




