ಉಪ್ಪಿನಂಗಡಿ : ಗಾಂಧಿ ಪಾರ್ಕ್ ಬಳಿಯ ಶ್ರೀರಾಮ ಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ನಗದು ದೋಚಿದ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26), ಜಂಶೀದ್ (25) ಎಂದು ಗುರುತಿಸಲಾಗಿದೆ.

ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ ಗುಂಡಿಜೆ ಎಂಬವರಿಗೆ ಸೇರಿದ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರದಲ್ಲಿ ಅ.27ರಂದು ಕಳವು ನಡೆದಿತ್ತು. ಮಧ್ಯಾಹ್ನ ಅಂಗಡಿಯ ಮಾಲಕ ಶೆಟರ್ ತೆರೆದಿಟ್ಟು ಕ್ಯಾಷ್ ಡ್ರಾವರ್ಗೆ ಬೀಗ ಹಾಕಿ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಡ್ರಾವರ್ ಮುರಿದು ಹಾಕಲಾಗಿದ್ದು, ಅದರಲ್ಲಿದ್ದ 5 ಲಕ್ಷ ರೂ. ನಗದು , ದಾಖಲೆ ಪತ್ರ, ಚೆಕ್ಗಳಿದ್ದ ಬ್ಯಾಗ್ ಅನ್ನು ದೋಚಿದ್ದಾರೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ತನಿಖೆ ಕೈಗೊಂಡ ಎನ್.ಆರ್.ಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




