ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅವಕಾಶ ನೀಡದ ಕಾರಣಕ್ಕೆ ಇಬ್ಬರು ಕೈದಿಗಳು ಜೈಲರ್ ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಮೂಲದ ರೌಡಿಗಳಾದ ಕೌಶಿಕ್ ನಿಹಾಲ್ ಮತ್ತು ಮುಹಮ್ಮದ್ ಅಬ್ದುಲ್ ಫಯಾನ್ ಎಂದು ಗುರುತಿಸಲಾಗಿದೆ.

ಕೆಲ ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳ ನಿಯಂತ್ರಣಕ್ಕೆ ಜೈಲರ್ ಕಲ್ಲಪ್ಪ ಸಂಪೂರ್ಣ ನಿರ್ಬಂಧ ಹೇರಿದ್ದರು ಮತ್ತು ತಪಾಸಣೆ ಬಿಗಿಗೊಳಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗಳು ಜೈಲರ್ ಜೊತೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ಸಮವಸ್ತ್ರವನ್ನೂ ಹರಿದು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಜೈಲರ್ ಕಲ್ಲಪ್ಪ ಗಸ್ತಿ ಮತ್ತು ಸಿಬ್ಬಂದಿಯನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.





