ಬೆಳ್ತಂಗಡಿ : ರಸ್ತೆ ಕಾಮಗಾರಿಗೆ ಪಟ್ಟ ಜಮೀನಿನಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸಿ ಶಾಸಕ ಹರೀಶ್ ಪೂಂಜ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮಲವಂತಿಗೆ ಗ್ರಾಮದ ಪಾಮಾಜಿ ಎಂಬ ಪ್ರದೇಶದಲ್ಲಿ ಸುಮಾರು 55 ಮನೆಗಳಿರುವ ಜನವಸತಿ ಪ್ರದೇಶಕ್ಕೆ ರಸ್ತೆ ಸಂಪರ್ಕವೇ ಇರಲಿಲ್ಲ. ಈ ಸಮಸ್ಯೆ ಶಾಸಕರ ಗಮನಕ್ಕೆ ಬಂದ ಕೂಡಲೇ ಅವರು ಸಂಪರ್ಕಕ್ಕೆ ಅನುಕೂಲವಾಗುವಂತೆ ಅನುದಾನ ಒದಗಿಸಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು.

ಇದಾದ ಬಳಿಕ ಈ 50 ಮನೆಗಳಿಗೆ ರಸ್ತೆ ನಿರ್ಮಿಸಲು ಪಟ್ಟ ಜಮೀನಿನಲ್ಲಿ ರಸ್ತೆ ಹಾದುಹೋಗಬೇಕಾಗಿದ್ದರಿಂದ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಇದನ್ನು ಅರಿತ ಶಾಸಕರು ಸ್ಥಳೀಯ ನಿವಾಸಿಗಳಲ್ಲಿ ಚರ್ಚಿಸಿ ಪಟ್ಟ ಜಾಗದ ಸಮಸ್ಯೆ ಪರಿಹರಿಸಿ ರಸ್ತೆ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಶಕ್ತಿಕೇಂದ್ರ ಅಧ್ಯಕ್ಷರಾದ ಮದುಸೂದನ್, ಮಂಡಲ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ರಸ್ತೆ ಕಾಮಗಾರಿ ಆರಂಭಗೊಂಡ ಹಿನ್ನಲೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.





