ಮಹಾರಾಷ್ಟ್ರ: ಮದುವೆ ಮಂಟಪದಲ್ಲಿ ವರನಿಗೆ ಚಾಕು ಇರಿದು ಆರೋಪಿಗಳು ಪರಾರಿಯಾಗಿರುವ ಘಟನೆ ಮಹಾರಾಷ್ಟ್ರ ಸಮೀಪದ ಅಮರಾವತಿಯ ಬದ್ನೇರಾನಲ್ಲಿ ನಡೆದಿದೆ.

ನ.11 ರಂದು ರಾತ್ರಿ ಸುಜಲ್ ಸಮುದ್ರೆ ಎನ್ನುವವರ ವಿವಾಹ ನಡೆಯುತ್ತಿತ್ತು. ಈ ವೇಳೆ ಮದುವೆಗೆ ಬಂದಂತೆ ನಾಟಕವಾಡಿಕೊಂಡು ಬಂದ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಚಾಕುವಿನಿಂದ ವರನ ಮೇಲೆ ಹಲ್ಲೆ ನಡೆಸಿ ಬೈಕ್ನಲ್ಲಿ ಪರಾರಿ ಆಗಿದ್ದಾರೆ. ಘಟನೆ ವೇಳೆ ಡ್ರೋನ್ ಬಳಸಿಕೊಂಡು ಮದುವೆಯ ಚಿತ್ರೀಕರಣವನ್ನು ಮಾಡುತ್ತಿದ್ದ ಕ್ಯಾಮೆರಾಮ್ಯಾನ್ ಆರೋಪಿಗಳ ಬೆನ್ನಟ್ಟಲು ಶುರು ಮಾಡಿದ್ದಾರೆ.

ಆರೋಪಿಗಳನ್ನು ಹಿಡಿಯಲು ವರನ ತಂದೆ ಹಿಂದೆಯೇ ಓಡಿದ್ದಾರೆ. ಡ್ರೋನ್ ಕ್ಯಾಮೆರಾ ಆರೋಪಿಗಳನ್ನು ಹಿಂಬಾಲಿಸಿಕೊಂಡು ಹೋಗಿದೆ. ಸುಮಾರು 2 ಕೀ.ಮೀ ದೂರದವರೆಗೂ ಆರೋಪಿಗಳ ಹಿಂದೆಯೇ ಡ್ರೋನ್ ಹೋಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಾಯಗೊಂಡ ವರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.




