ಬಂಟ್ವಾಳ : ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಆಯೋಜನೆಗೊಂಡಿರುವ ಜಾಗತಿಕ ಬಿಲ್ಲವರ ಕ್ರೀಡೋತ್ಸವವು ಜ. 18ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಹೇಳಿದರು.

ಅವರು ಬಿ.ಸಿ.ರೋಡಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಮುದಾಯದ ಯುವಕರನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ದೃಷ್ಟಿಯಿಂದ ಈ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು ಪಂದ್ಯಾಟದಲ್ಲಿ ಬಿಲ್ಲವ ಮತ್ತು ಅದರ ಇತರ ಉಪಪಂಗಡದವರಿಗೆ ಮಾತ್ರ ಆಟಗಾರರಾಗಿ, ವ್ಯವಸ್ಥಾಪಕರಾಗಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.

ಪುರುಷರ ಕಬಡ್ಡಿಯಲ್ಲಿ 24 ತಂಡಗಳು, ಮಹಿಳಾ ಕಬಡ್ಡಿ ತ್ರೋಬಾಲ್, ಪುರುಷರ ವಾಲಿಬಾಲ್ನಲ್ಲಿ ತಲಾ 16 ತಂಡಗಳಿಗೆ ಅವಕಾಶವಿದೆ. ಈಗಾಗಲೇ ಆನ್ ಲೈನ್ ನೋಂದಣಿ ಆರಂಭಗೊಂಡಿದ್ದು, ನ. 30 ರೊಳಗೆ ನೋಂದಣಿ ಮಾಡಬೇಕಾಗುತ್ತದೆ.

ಪುರುಷರ ಕಬಡ್ಡಿ ವಿಜೇತರಿಗೆ ಕ್ರಮವಾಗಿ 2 ಲಕ್ಷ ರೂ. 1 ಲಕ್ಷ ರೂ. 50 ಸಾವಿರ ರೂ. ಹಾಗೂ 25 ಸಾವಿರ ರೂ.ಗಳ ನಾಲ್ಕು ಸ್ಥಾನಗಳ ನಗದು ಬಹುಮಾನವಿರುತ್ತದೆ. ಮಹಿಳಾ ಕಬಡ್ಡಿ, ತ್ರೋಬಾಲ್ , ಪುರುಷರ ವಾಲಿಬಾಲ್ ವಿಜೇತರಿಗೆ ಕ್ರಮವಾಗಿ 1 ಲಕ್ಷ ರೂ, 50 ಸಾವಿರ ರೂ. 25 ಸಾವಿರ ರೂ. ಹಾಗೂ 10 ಸಾವಿರ ರೂ.ಗಳ ನಾಲ್ಕು ಸ್ಥಾನಗಳ ನಗದು ಬಹುಮಾನವಿರುತ್ತದೆ. ಜೊತೆಗೆ ಪ್ರತಿ ವಿಭಾಗದಲ್ಲಿ ವೈಯಕ್ತಿಕ ಬಹುಮಾನಗಳಿರುತ್ತದೆ. ಪ್ರತೀ ತಂಡದಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಇಬ್ಬರು ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ಬೇಬಿ ಕುಂದರ್, ಜೀವನ್ ಕುಮಾರ್ ತೊಕ್ಕೊಟ್ಟು, ಜಯಪ್ರಕಾಶ್ ಜೆ.ಎಸ್, ಸದಾನಂದ ಪೂಜಾರಿ ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ, ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.



