ಮಂಗಳೂರು: ಸುರತ್ಕಲ್ ಚೂರಿ ಇರಿತ ಪ್ರಕರಣ ಪ್ರಮುಖ ಆರೋಪಿಯಾಗಿರುವ ಗುರುರಾಜ್ ಅರೆಸ್ಟ್ ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದೀಪಕ್ ಬಾರ್ ಸಮೀಪ ಅ.23 ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬವರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಅವರನ್ನು ಅರೆಸ್ಟ್ ಮಾಡಲು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಆರೋಪಿ ಕುಳಾಯಿ ಗ್ರಾಮದ ಕುಳಾಯಿ ಗುಡ್ಡೆ ಪ್ರಗತಿ ನಗರದ ಬಳಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಅ. 25 ರಂದು ಪೊಲೀಸರು ಸಿಬ್ಬಂದಿಗಳ ಜೊತೆ ಮಾಹಿತಿ ಬಂದ ಸ್ಥಳವಾದ ಕುಳಾಯಿ ಗುಡ್ಡೆ ಬಳಿ ಹೊನ್ನಕಟ್ಟೆಯಿಂದ ಕಾನಾ ಕಡೆಗೆ ಹೋಗುವ ರಸ್ತೆಯಲ್ಲಿ ಪ್ರಗತಿ ನಗರದ ಬಳಿ ಹೋಗಿದ್ದಾರೆ.

ಅಲ್ಲಿ ಮರದ ಕೆಳಗೆ ಕುಳಿತಿದ್ದ ಆರೋಪಿ ಗುರುರಾಜ್ ಅವರನ್ನು ಹಿಡಿಯಲು ಪೊಲೀಸರು ಹೋಗಿದ್ದಾರೆ. ಈ ವೇಳೆ ಆರೋಪಿ ನೆಲದ ಮೇಲೆ ಬಿದ್ದಿದ್ದ ಮರದ ದೊಣ್ಣೆಯೊಂದನ್ನು ತೆಗೆದುಕೊಂಡು ಪಿಸಿ ವಿನಾಯಕ ಅವರ ಎಡಭುಜಕ್ಕೆ ಹೊಡೆದಿದ್ದಾನೆ, ಅಲ್ಲದೆ ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ಓಡಿ ಹೋಗಿದ್ದಾನೆ. ಬಳಿಕ ಇತರ ಪೊಲೀಸ್ ಸಿಬ್ಬಂದಿಗಳು ಆರೋಪಿಯನ್ನು ಬೆನ್ನಟ್ಟಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಅರೆಸ್ಟ್ ಮಾಡಲು ತೆರಳಿದ್ದ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ಆರೋಪಿ ಗುರುರಾಜ್ ಎಂಬಾತ ವಿರುದ್ಧ ದೂರು ದಾಖಲಾಗಿದೆ.



