ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಅ.17 ರಂದು ಹೊಸ ಅಕ್ಕಿ ಅಗೇಲು ಸೇವೆ ನಡೆಯಿತು.
ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ತಾಯಿಗೆ ಹೊಸ ಅಕ್ಕಿಯ ಅನ್ನ ಹಾಗೂ ಹಲವಾರು ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥದ ನೈವೇದ್ಯದೊಂದಿಗೆ ಅಗೇಲು ಸಮರ್ಪಿಸುವ ಪರಂಪರೆ ನಡೆದುಕೊಂಡು ಬರುತ್ತಿದೆ.

ಇಲ್ಲಿ ಇತರೆ ದಿನಗಳಲ್ಲಿ ನಡೆಯುವ ಅಗೆಲು ಸೇವೆಯಂತೆ ದೈವಕ್ಕೆ ಅಗೇಲು ಸೇವೆ ಈ ಕಾವೇರಿ ಸಂಕ್ರಮಣದ ದಿನದಂದು ನಡೆಯುತ್ತದೆ. ಅಗೇಲು ಬಡಿಸಲು ಹೊಸ ಅಕ್ಕಿಯನ್ನು ಉಪಯೋಗಿಸಲಾಗುತ್ತದೆ. ತುಳುವಿನಲ್ಲಿ ಇದಕ್ಕೆ ಪುದ್ದಾರ್ ಎಂದು ಹೇಳಲಾಗುತ್ತದೆ.

ಕಾವೇರಿ ಸಂಕ್ರಮಣ ಸೋಮವಾರ ಅಥವಾ ಶನಿವಾರ ಬಂದಲ್ಲಿ ದೈವಕ್ಕೆ ಅಗೇಲು ಸೇವೆ ಮಾಡುವುದಿಲ್ಲ, ಇದರ ಬದಲಾಗಿ ಮುಂದಿನ ದಿನ ಅಥವಾ ಮರುದಿನ ಹೊಸ ಅಕ್ಕಿ ಅಗೇಲು ಬಡಿಸಲಾಗುತ್ತದೆ. ಕಾವೇರಿ ಸಂಕ್ರಮಣದ ಪುದ್ದಾರ್ ಸೇವೆಗೆ ಭಕ್ತರು 1480 ಅಗೇಲು ಸೇವೆಯನ್ನು ನೀಡಿದ್ದಾರೆ.
ಪಣೋಲಿಬೈಲು ಕ್ಷೇತ್ರದ ಒಂದನೇ ಅರ್ಚಕ ವಾಸು ಮೂಲ್ಯ, ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳಿಯ ಸೇರಿದಂತೆ ದೈವದ ಚಾಕರಿಯವರು, ಸಿಬ್ಬಂದಿಗಳು ಹಾಗೂ ಊರ-ಪರ ಊರಭಕ್ತರು ವಿಶೇಷ ದಿನದ ಪುದ್ದಾರ್ ಸೇವೆಯಲ್ಲಿ ಭಾಗವಹಿಸಿದ್ದರು.




