ಬಂಟ್ವಾಳ: ಕಾರು ಚಾಲಕನ ಅಜಾಗರೂಕತೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ಕಡೂರು ರಾಷ್ಟ್ರೀಯ ಹೆದ್ದಾರಿಯ ಗಾಣದಪಡ್ಪು ಎಂಬಲ್ಲಿ ಅ.14ರಂದು ನಡೆದಿದೆ.

ಬೋಳಂತೂರು ನಿವಾಸಿ ಜಬ್ಬಾರ್ (33) ಎಂಬವರು ಕಾರು ಡಿಕ್ಕಿಯಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಅವಿವಾಹಿತರಾಗಿರುವ ಜಬ್ಬಾರ್ ಅವರು ಗಾಣದಪಡ್ಪು ಶಿವಗಣೇಶ್ ಬ್ಯಾಟರಿ ಅಂಗಡಿಯ ಕಾರ್ಮಿಕನಾಗಿ, ಆಟೋ ಇಲೆಕ್ಟಿಕಲ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಎಂದಿನಂತೆ ಇಂದು ಬೆಳಿಗ್ಗೆ ಗಾಣದಪಡ್ಪು ಹೆದ್ದಾರಿಯ ಬದಿಯಲ್ಲಿ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ವೇಣೂರು ಮೂಲದ ವ್ಯಕ್ತಿಯೊಬ್ಬರು ಬೇಜಬ್ದಾರಿಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಜಬ್ಬಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



