ಮಂಗಳೂರು: ಬಾವಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯ ಗ್ರಾಮದ ಪಾದೆಯಲ್ಲಿ ಅ.09 ರಂದು ನಡೆದಿದೆ.

ಮೃತಪಟ್ಟ ಯುವಕನನ್ನು ಕಿನ್ಯ ನಿವಾಸಿ ವಿಶ್ವನಾಥ ಶೆಟ್ಟಿ ಅವರ ಪುತ್ರ ಮಿಥುನ್ ಶೆಟ್ಟಿ (32) ಎಂದು ಗುರುತಿಸಲಾಗಿದೆ.

ಮಿಥುನ್ ಅವರು ರಾತ್ರಿ ಮಲಗಿದ್ದು ಬೆಳಗ್ಗೆ ಕಾಣೆಯಾಗಿದ್ದರು. ಇದರಿಂದ ಕುಟುಂಬದವರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಕಿನ್ಯ ಗ್ರಾಮ ಪಂಚಾಯತ್ ಕಟ್ಟಡದ ಬಳಿಯ ಬಾವಿಯ ಬಳಿ ಒಂದು ಜೋಡಿ ಚಪ್ಪಲಿಗಳು ಪತ್ತೆಯಾಗಿವೆ.

ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಗೃಹರಕ್ಷಕ ದಳದ ಪ್ರಸಾದ್ ಸುವರ್ಣ, ಸ್ಥಳೀಯರಾದ ಹೈನಾರ್ ಕಿನ್ಯ, ಫಾರೂಕ್ ಉಳ್ಳಾಲ್, ರಜಾಕ್ ಕಿನ್ಯ, ಅನ್ಸಾರ್ ಕಿನ್ಯ, ರೌಫ್ ಮತ್ತು ಹೈದರ್ ಕಿನ್ಯ ಅವರೊಂದಿಗೆ ನೀರಿನ ಅಡಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ನಂತರ ಮಧ್ಯಾಹ್ನದ ವೇಳೆಗೆ ಶವವನ್ನು ಪತ್ತೆ ಹಚ್ಚಲಾಯಿತು.

ಮಿಥುನ್ ಮಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



