ಉಡುಪಿ: ಬ್ರಹ್ಮಾವರ ಸಮೀಪದ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಗಾಂಧಿನಗರದ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಅಡುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಬ್ರಹ್ಮಾವರದ ಕುದಿ ಗ್ರಾಮದ ಕುಂಜೂರು, ಬೈದಬೆಟ್ಟು ನಿವಾಸಿ ಕುಮಾರ ಹೆಗ್ಡೆ (59 ) ಎಂದು ಗುರುತಿಸಲಾಗಿದೆ.

ಆರೋಪಿ ಕುಮಾರ ಹೆಗ್ಡೆ ಸಾರ್ವಜನಿಕರಿಗೆ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಜನರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಜುಗಾರಿ ಆಡುತ್ತಿದ್ದನು ಎನ್ನಲಾಗಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಒಟ್ಟು ಮಾಡಿ ಅದನ್ನು ಆರೋಪಿ ಕರ್ಜೆಯ ಸಂತೋಷ್ ಶೆಟ್ಟಿ ಎಂಬಾತನಿಗೆ ನೀಡುತ್ತಿರುವುದಾಗಿ ಆರೋಪಿ ಕುಮಾರ ಹೆಗಡೆ ಪೊಲೀಸ್ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಸದ್ಯ ಆರೋಪಿಯಿಂದ ಪೊಲೀಸರು ನಗದು 815 ರೂಪಾಯಿ ಮತ್ತು ಮಟ್ಕಾ ನಂಬ್ರಗಳನ್ನು ಬರೆದಿರುವ ಚೀಟಿ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



