ಕುಂದಾಪುರ: ಬೈಕ್ ಮೇಲೆ ಕಡವೆ ಹಾರಿ ನಿಯಂತ್ರಣ ತಪ್ಪಿದ ಬೈಕ್ ಸವಾರ ರಸ್ತೆಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರದ ಕಮಲಶಿಲೆ ಸಮೀಪದ ತಾರೆಕೊಡ್ಲು ಎಂಬಲ್ಲಿ ನಡೆದಿದೆ.

ಕಾವ್ರಾಡಿ ಸಮೀಪದ ಶ್ರೇಯಸ್ ಮೊಗವೀರ (22) ಎಂಬವರು ವಿಘ್ನೇಶ್ ಎಂಬ ಸ್ನೇಹಿತನ ಜೊತೆ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ತಾರೆಕೊಡ್ಲು ಸಮೀಪ ಕಡವೆ ಬೈಕ್ ಮೇಲೆ ಹಾರಿದ್ದು, ಪರಿಣಾಮ ಬೈಕ್ ಪಲ್ಟಿಯಾಗಿ ಶ್ರೇಯಸ್ ಮೊಗವೀರ ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಕಡವೆ ಕೂಡ ಸಾವನ್ನಪ್ಪಿದೆ.

ಗಾಯಾಳು ವಿಘ್ನೇಶ್ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



