ಕಾರ್ಕಳ: ಪೊಲೀಸ್ ಕ್ವಾರ್ಟರ್ಸ್ನಲ್ಲಿ ಆಕಸ್ಮಿಕವಾಗಿ ಬಾಗಿಲು ಒಳಗಿನಿಂದ ಲಾಕ್ ಆಗಿ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಮಗುವನ್ನು ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಪೊಲೀಸ್ ಕ್ವಾರ್ಟರ್ಸ್ ಸಿ-ಬ್ಲಾಕ್ನ ಎರಡನೇ ಮಹಡಿಯಲ್ಲಿ ಹರ್ಷವರ್ಧನ್ ಎಂಬ ಎರಡು ವರ್ಷದ ಮಗು ಆಟವಾಡುತ್ತಿತ್ತು.

ಈ ವೇಳೆ ಆಕಸ್ಮಿಕವಾಗಿ ಕೊಠಡಿಯೊಳಗೆ ಹೋಗಿ ಬಾಗಿಲು ಒಳಭಾಗದಿಂದ ಲಾಕ್ ಆಗಿ, ಮಗು ಒಳಗಿನಿಂದ ಹೊರಬರಲು ಸಾಧ್ಯವಾಗದಾಗಿದ್ದು, ಬಳಿಕ ಪೋಷಕರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಟೇರಿಸ್ ಮೇಲಿಂದ, ಹಗ್ಗದ ಸಹಾಯ ಪಡೆದು, ಬಾಲ್ಕನಿ ಮೂಲಕ ಇಳಿದು ಬಾಗಿಲು ತೆರೆದು, ಕೇವಲ 15 ನಿಮಿಷಗಳಲ್ಲಿ ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಚ್ಯುತ್ ಕರ್ಕೇರ, ಹರಿಪ್ರಸಾದ್, ಜಯಮೂಲ್ಯ, ದಿನೇಶ್ ಮತ್ತು ಬಸವರಾಜ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



