ಹರಪನಹಳ್ಳಿ: ತಾಲೂಕಿನ ಇ.ಬೇವಿನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 27 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಸೆ. 11ರಂದು ನಡೆದಿದೆ.
ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವನೆ ಮಾಡುವಾಗ ವಿದ್ಯಾರ್ಥಿಯೋವ೯ನ ತಟ್ಟೆಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದು, ಆಗ ವಿದ್ಯಾರ್ಥಿ ಅಡುಗೆ ಸಿಬ್ಬಂದಿಯವರಿಗೆ ತಿಳಿಸಿದ್ದಾನೆ.
ತಕ್ಷಣ ಅಡುಗೆ ಸಿಬ್ಬಂದಿಯವರು ಮಕ್ಕಳಿಗೆ ಊಟ ಮಾಡದಂತೆ ತಿಳಿಸಿದ್ದಾರೆ, ಆಗಲೇ ಮಕ್ಕಳು ಸ್ವಲ್ಪ ತುತ್ತು ಊಟ ಮಾಡಿದ್ದರು ಎನ್ನಲಾಗಿದೆ.

ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿರುವುದು ಗ್ರಾಮದ ಪೋಷಕರ ಗಮನಕ್ಕೆ ಬಂದಿದೆ. ಆಗ ಅವರು ಶಾಲೆಗೆ ಭೇಟಿ ನೀಡಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದ್ಯೋಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಅಸ್ವಸ್ಥಗೊಂಡ 27 ವಿದ್ಯಾರ್ಥಿಗಳ ಪೈಕಿ 3 ಮಕ್ಕಳಿಗೆ ವಾಂತಿಯಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡು ಉಳಿದವರನ್ನು ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದ್ದು, ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ.




