ಉಡುಪಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನ ಲಕ್ಷಾಂತರ ರೂ.ಹಣವನ್ನು ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ ಮಲ್ಪೆ ಶಾಖೆಯ ಮ್ಯಾನೇಜರ್ ಸೇರಿದಂತೆ ಇತರರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌಸಿಂಗ್ ಫೈನಾನ್ಸ್ ಕಂಪನಿಯೊಂದರಿಂದದ ಬಂದ ಇಮೇಲ್ ಸಂದೇಶದಂತೆ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸಮುದ ಸುವರ್ಣ ನಂತೂರು, ಶರ್ಮಿಳಾ ಎಸ್.ಮೂಳೂರು, ಸುಶಾಂತ್ ತಿಂಗಳಾಯ ಕೋಡಿ, ಎಂ. ರಮಾನಾಥ್ ಬೊಂದೇಲ್, ಸದಾನಂದ ಜಿ. ರಾವ್ ಕುಂಜಾಲು ಎಂಬ ಖಾತೆದಾರರಿಂದ ಒಟ್ಟು 73 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಆ.25ರಂದು ಮುಂಬಯಿಯ ಎಸ್ಬಿಐ ಶಾಖೆಯಿಂದ ವಿವರವನ್ನು ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಣಪತಿ ಗಂಗೊಳ್ಳಿ ಅವರಲ್ಲಿ ಕೇಳಲಾಗಿತ್ತು.

ಅದರಂತೆ ಮ್ಯಾನೇಜರ್ ರಾಜೇಶ್ ಅವರು ಮಲ್ಪೆ ಶಾಖೆಯಿಂದ ಆಗಿರುವ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆ.26ರಂದು ಮುಂಬಯಿ ಶಾಖೆಗೆ ಸಲ್ಲಿಕ್ಕೆ ಮಾಡಿದ್ದರು.
ಬಳಿಕ ಫೈನಾನ್ಸ್ ಕಂಪನಿಯಿಂದ ಅದೇ ದಿನ ಬಂದ ಇಮೇಲ್ ನಲ್ಲಿ ಕಂಪನಿಯಿಂದ ಹಣ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಮನವಿಯನ್ನು ಮಲ್ಪೆ ಶಾಖೆಗೆ ಕಳುಹಿಸಿಲ್ಲ ಎಂಬುವುದಾಗಿ ತಿಳಿಸಲಾಗಿತ್ತು.

ಈ ಬಗ್ಗೆ ಪರಿಶೀಲಿಸಿದಾಗ ಮಲ್ಪೆ ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿದ್ದ ಮೀರಾ ಪಲ್ಲವಿ ಟಿ.ಎಚ್. ಅವರು ಮೇಲಿನ ಖಾತೆದಾರರು ಮತ್ತು ಇತರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು 73 ಲಕ್ಷ ರೂ. ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿ ಸ್ವಂತಕ್ಕೆ ಬಳಸಿ ಬ್ಯಾಂಕ್ ಗೆ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮ್ಯಾನೇಜರ್ ರಾಜೇಶ್ ಗಣಪತಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


