ಬಂಟ್ವಾಳ: ಗೂಡ್ಸ್ ಸಣ್ಣ ಮತ್ತು ದೊಡ್ಡ ಪಿಕಪ್, 407, ಟೆಂಪೋ ರಿಕ್ಷಾ ಚಾಲಕ ಮಾಲಕರ ಸಂಘದ 25ನೇ ವಾರ್ಷಿಕ ಮಹಾಸಭೆ ಆ. 24 ರಂದು ಬಿ.ಸಿ.ರೋಡ್ನ ರಿಕ್ಷಾ ಭವನದಲ್ಲಿ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2025ನೇ ಸಾಲಿನ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ನಾರಾಯಣ ಹೊಸಮಾರು, ಕಾರ್ಯದರ್ಶಿ ರಾಬರ್ಟ್ ಮೆಲ್ಕಾರ್, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ, ಕೋಶಾಧಿಕಾರಿ ಲಾತಿಫ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಸದಸ್ಯರಾಗಿದ್ದ ಇತ್ತೀಚೆಗೆ ವಿಧಿವಶರಾದ ಸದಸ್ಯರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸದಸ್ಯರು ತಮ್ಮ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ನಾರಾಯಣ ಗುರು ವೃತ್ತದ ಬಳಿ ಸದಸ್ಯರು ಶ್ರಮಪಟ್ಟು ನಿರ್ಮಿಸಿರುವ ಟೆಂಪೋ ನಿಲ್ದಾಣದಲ್ಲಿ ಅಕ್ರಮವಾಗಿ ಗೂಡಂಗಡಿಯನ್ನು ನಿರ್ಮಿಸಿ ವ್ಯವಹಾರ ನಡೆಸಲಾಗುತ್ತಿದೆ ಎಂಬುದನ್ನು ಸಭೆಯಲ್ಲಿ ಈಡು ಮಾಡಲಾಯಿತು. ಇದರ ಜೊತೆಗೆ, ಕಲ್ಲಡ್ಕ ಮೆಲ್ಸೇತುವೆಯ ಕೆಳಗೆ ಗೂಡ್ಸ್ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಶಾಸಕರು ಹಾಗೂ ಸಂಸದರ ಬಳಿ ಮನವಿ ಸಲ್ಲಿಸಲು ನಿರ್ಧಾರವಾಯಿತು.

ಅಧ್ಯಕ್ಷ ರಾಜೇಶ್ ಬೊಳ್ಳುಕಲ್ಲು ಅವರು ಮಾತನಾಡಿ, ಸಂಘದ ಸದಸ್ಯರು ಕಾನೂನನ್ನು ಪಾಲಿಸಿ ತಮ್ಮ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಸಂಘವನ್ನು ಟ್ರೇಡ್ ಯೂನಿಯನ್ ಆಗಿ ನೋಂದಾಯಿಸಿ, ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಸಂಘದ ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ ಅವರು ಸದಸ್ಯರು ಮಹಾಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ವಿನಂತಿಸಿ, ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಅತಿಥಿಗಳನ್ನು ರಾಬರ್ಟ್ ಮೆಲ್ಕಾರ್ ಸ್ವಾಗತಿಸಿ, ನಾರಾಯಣ ಹೊಸಮಾರು ವಂದಿಸಿದರು.



