ಬಂಟ್ವಾಳದಿಂದ ಸೊರ್ನಾಡು, ಅಣ್ಣಳಿಕೆ, ಕುದ್ಕೋಳಿ, ರಾಯಿವರೆಗಿನ ಭಾಗದ ರಸ್ತೆಯು ತುಂಬಾನೇ ಹದಗೆಟ್ಟಿದ್ದು ಮಳೆಗಾಲದಲ್ಲಂತೂ ಈ ಮಾರ್ಗದಲ್ಲಿ ಪ್ರಯಾಣಿಸುವ ಜನರು ತುಂಬಾನೇ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ದೊಡ್ಡ ಹಂಪ್, ವಾಹನದ ಚಕ್ರ ಅದರ ಮೇಲೆ ಬಂದು ಕೆಳಗಿಳಿದರೆ ಹೊಂಡ. ಇದು ಬಂಟ್ವಾಳದಿಂದ ಆರಂಭದಲ್ಲೇ ಬಂಟ್ವಾಳದ ಜಂಕ್ಷನ್ (ಬೈಪಾಸ್) ನಲ್ಲಿ ಆದಂತಹ ಹೊಂಡ. ರಸ್ತೆಯಲ್ಲಿ ಹಾಗೆಯೇ ಮುಂದುವರಿದರೆ, ಸಣ್ಣಪುಟ್ಟ ಹೊಂಡಗಳು ಸಿಗುತ್ತವೆ. ಆದರೆ ಲೊರೆಟ್ಟೋ ಪದವು ದಾಟಿ ಸೊರ್ನಾಡು ಬಾಗದಲ್ಲಿ, ರಸ್ತೆ ಶೋಚನೀಯವಾಗಿದ್ದು, ರಾಯಿ ಸಮೀಪದವರೆಗೂ ಹಂತ ಹಂತವಾಗಿ ಹೊಂಡಗಳು ಗೋಚರಿಸುತ್ತಿದೆ.

ಸೊರ್ನಾಡ್ ಸಮೀಪ ಮುಲಿಯ ಕ್ರಾಸ್ ನಲ್ಲಿ ರಸ್ತೆ ತುಂಡಾಗಿರುವುದು
ಅಣ್ಣಳಿಕೆ ಬಾಗದ ರಸ್ತೆಯೇ ಕಾಣಿಸದಾದ ಪರಿಸ್ಥಿತಿ ನಿರ್ಮಾಣವಾಗಿದ್ದು. ಮುಲಿಯ ಬಸ್ ನಿಲ್ದಾಣದ ಬಳಿ ರಸ್ತೆಯೇ ಹಾಳಾಗಿದೆ. ಮಾಡಮೆ ಸಮೀಪ ನೀರು ರಸ್ತೆಯಲ್ಲಿ ಹರಿದುಹೋಗುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಿತ್ಯಪ್ರಯಾಣಿಕರ ಪ್ರಕಾರ, ಇಡೀ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೇ ಇರುವುದೇ ಈ ಸಮಸ್ಯೆಗೆ ಮೂಲಕಾರಣವಾಗಿದೆ.
ಈ ಮಾರ್ಗವು ರಾಜ್ಯ ಹೆದ್ದಾರಿಯಾಗಿದ್ದು ಆಗಾಗ ಹಾಳಾಗುತ್ತಿದ್ದು, ವಾಹನಗಳು ಗಡಗಡನೆ ನಡುಗುತ್ತಾ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಅಣ್ಣಳಿಕೆ ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ಅಸಾಧ್ಯ….
ಇವತ್ತಲ್ಲ, ನಾಳೆ ಸರಿಹೋಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು
ಈ ಹದಗೆಟ್ಟ ರಸ್ತೆಯಿಂದ ತೆರಳುವ ಶಾಲೆ ಮಕ್ಕಳಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳು ಬಸ್ಸುಗಳಿಗೆ ಈ ಹೊಂಡಗಳ ಪಕ್ಕದಲ್ಲೇ ಕಾದು ನಿಲ್ಲುತ್ತಾರೆ. ಮೂಡುಬಿದಿರೆ ಅಥವಾ ಬಂಟ್ವಾಳಕ್ಕೆ ತಮ್ಮ ವ್ಯವಹಾರಗಳಿಗಾಗಿ ಈ ಮಾರ್ಗದಲ್ಲೆ ಸಾಗುತ್ತಿದ್ದು ಈ ಹದಗೆಟ್ಟ ರಸ್ತೆಯಿಂದ ಜನರಿಗೆ ತಲೆನೋವಿನ ಜತೆಗೆ ಬೆನ್ನುನೋವು ತಂದೊದಗಿಸಿದೆ. ಇವತ್ತಲ್ಲ, ನಾಳೆ ಸರಿಹೋಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಮಳೆಗಾಲವಾದ ಕಾರಣ ಕಾಮಗಾರಿ ನಡೆಸಲು ಹಿನ್ನಡೆಯಾಗಿದೆ. ಬಿಸಿಲಿನ ವಾತಾವರಣ ಕಂಡಕೂಡಲೇ ಪ್ಯಾಚ್ ವರ್ಕ್ ಸಹಿತ ಕೆಲಸ ಕಾರ್ಯಗಳಿಗೆ ವೇಗ ದೊರಕಲಿದೆ. ಈ ಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
– ಜೈಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ , ಲೋಕೋಪಯೋಗಿ ಇಲಾಖೆ, ಬಂಟ್ವಾಳ ಉಪವಿಭಾಗ





