ಬಂಟ್ವಾಳ: ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಉತ್ಸವ ಸಮಿತಿ ಕಲ್ಲಡ್ಕ ಇದರ ವತಿಯಿಂದ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬಿಜೆಪಿ ಸಕ್ರೀಯ ಕಾರ್ಯಕರ್ತ,ಸಂಘದ ಸ್ವಯಂಸೇವಕ, ನಾಟಕ ಕಲಾವಿದ , ಶಾರದಾ ಪ್ರತಿಷ್ಠಾನದ ಸ್ಥಾಪಕ ಸದಸ್ಯ, ಕಾರ್ಯಕ್ರಮ ನಿರೂಪಕ, ಚಿತ್ರನಟ, ಕ್ರೀಡಾಪಟುಯಾಗಿರುವ ಚಿ.ರಮೇಶ್ ಅವರಿಗೆ ನುಡಿನಮನ ಕಾರ್ಯಕ್ರಮ ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನುಡಿನಮನ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಪ್ರಮುಖರಾದ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕರಾದ ಡಾ.ಪ್ರಭಾಕರ್ ಭಟ್ ಅವರು ಮಾತನಾಡಿ, ರಂಗಭೂಮಿಯೇ ಅವರಿಗೆ ಬದುಕಾಗಿತ್ತು, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿ.ರಮೇಶ್ ಅವರು ಮಾಡುತ್ತಿದ್ದ ನಾಟಕದ ಪಾತ್ರ ಜೀವನದಲ್ಲಿ ನಾವು ಇರಬೇಕಾದ ಸಂದೇಶ ನೀಡುವ ಪಾತ್ರವಾಗಿತ್ತು ಆ ಮೂಲಕ ಜನರಿಗೆ ಹೆಚ್ಚು ಪ್ರಿಯರಾಗಿದ್ದರು, ಅನೇಕ ಹಾಸ್ಯ ನಾಟಕಗಳ ಮೂಲಕ ಮಿಂಚಿದ್ದರು. ನಾಟಕದಲ್ಲಿ ನಾನು ನೀಡುವ ಸಂದೇಶದಂತೆಯೇ ಬದುಕಬೇಕು ಎಂಬ ಕಲ್ಪನೆಯಲ್ಲಿ ಬದುಕು ಸಾಗಿಸಿದವರು ಎಂದರು.

ವೈಯಕ್ತಿಕ ಜೀವನದಲ್ಲಿ ಅನೇಕ ಕಷ್ಟಗಳಿದ್ದರು ಇತರರಿಗೆ ನೋವು ಕೊಟ್ಟವರಲ್ಲ, ನಗುಮೊಗದಿಂದ ಮಾತನಾಡುತ್ತಿದ್ದರು. ಅಜಾತಶತ್ರುವಾಗಿ ಬದುಕು ಕಳೆದವರು ಎಂದು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಸಿದರು. ಕಳೆದ 28 ವರ್ಷಗಳಿಂದ ಕಲಾಸಂಗಮದ ಕಲಾವಿದನಾಗಿದ್ದ ಅವರ ಬದುಕಿನ ಬಗ್ಗೆ ವಿಜಯಕುಮಾರ್ ಕೋಡಿಯಾಲ್ ಬೈಲ್ ಅವರು ಮಾತನಾಡಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ರಾಧಾಕೃಷ್ಣ ಅಡ್ಯಂತಾಯ, ನರಸಿಂಹ ಕಲ್ಲಡ್ಕ, ಪದ್ಮನಾಭ ರೈ,ನಾಗೇಶ್ ಕಲ್ಲಡ್ಕದ ನುಡಿ ನಮನ ಸಲ್ಲಿಸಿದರು. ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಅಧ್ಯಕ್ಷ ಯತಿನ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು.
ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.


