ಕಲ್ಲಡ್ಕದ ರಸ್ತೆಯಲ್ಲಿ ನೀರು ನಿಂತು ಅಪಘಾತ

ಕಲ್ಲಡ್ಕ: ಮಾಣಿ ಭಾಗದಿಂದ ಕುದ್ರಬೆಟ್ಟುನಲ್ಲಿ ಕಲ್ಲಡ್ಕದತ್ತ ಹೋಗುವ ಹೆದ್ದಾರಿಯಲ್ಲಿ ರಸ್ತೆ ಭಾಗದಲ್ಲಿ ನೀರು ನಿಂತ ಪರಿಣಾಮ ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಶುಕ್ರವಾರ ಮುಂಜಾನೆ ಬೆಂಗಳೂರು ಭಾಗದಿಂದ ಮಂಗಳೂರಿನತ್ತ ಆಗಮಿಸುತ್ತಿದ್ದ ಕಾರೊಂದು ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಸಂಜೆ ವೇಳೆ ಕಲ್ಲಡ್ಕದ ಆಸ್ಪತ್ರೆಯಿಂದ ರೋಗಿಯನ್ನು ಮಂಗಳೂರಿಗೆ ಸಾಗಿಸಲು ಸೂರಿಕುಮೇರಿನಿಂದ ಆಗಮಿಸುತ್ತಿದ್ದ ಆ್ಯಂಬುಲೆನ್ಸ್‌ ಕೂಡ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಇದರಿಂದಾಗಿ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಎರಡೂ ಅಪಘಾತಗಳಿಂದ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಮಳೆಗಾಲ ಪ್ರಾರಂಭವಾದಾಗಿನಿಂದ ಈ ರಸ್ತೆ ಭಾಗದಲ್ಲಿ ನೀರು ನಿಂತು ಅಪಾಯಕಾರಿ ಸ್ಥಿತಿ ಉಂಟಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆಯು ಕಾಂಕ್ರೀಟ್‌ ಅಗೆದು ದುರಸ್ತಿ ನಡೆಸಿದ್ದರೂ ನೀರು ಹರಿದು ಹೋಗದೆ ದೊಡ್ಡ ಪ್ರಮಾಣದಲ್ಲಿ ಹೆದ್ದಾರಿಯಲ್ಲೇ ಸಂಗ್ರಹಗೊಳ್ಳುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತ ಗಮನ ಹರಿಸಿ ನೀರು ನಿಲ್ಲದಂತೆ ಕ್ರಮ ವಹಿಸಲು ಗುತ್ತಿಗೆ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *