ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಅವಕಾಶ ನೀಡುವಂತೆ ಕೃಷಿ ಸಚಿವರಿಗೆ ಪ್ರಭಾಕರ ಪ್ರಭು ಮನವಿ

ಬಂಟ್ವಾಳ: ರಾಜ್ಯದಲ್ಲಿ 2024-25 ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡದ ರೈತರಿಗೂ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಅವಕಾಶ ನೀಡುವಂತೆ ಕೃಷಿ ಸಚಿವರಿಗೆ ಪ್ರಭಾಕರ ಪ್ರಭು ಮನವಿ ನೀಡಿದ್ದಾರೆ.

ಮನವಿಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ರಾಜ್ಯದ ಕರಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಅಡಿಕೆ ಮತ್ತು ಕರಿಮೆಣಸು , ಬೆಳೆಗಳಿಗೆ 2025-26 ನೇ ಸಾಲಿಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಪ್ರಿಮಿಯಂ ಮೊತ್ತ ಪಾವತಿಸಿ ನೋಂದಾವಣೆ ಮಾಡಲು ಜುಲೈ ತಿಂಗಳ ಅಂತ್ಯದವರೆಗೆ ಅವಕಾಶ ಕಲ್ಪಿಸಲಾಗಿದ್ದನ್ನು ಈ ಮಹತ್ವಾಕಾಂಕ್ಷೆ ಯೋಜನೆಯ ಪ್ರಯೋಜನ ಪಡೆಯಲು ಅಡಿಕೆ ಬೆಳೆಗಾರರು ಮತ್ತು ಕರಿಮೆಣಸು ಬೆಳೆಗಾರರು , ಪ್ರಿಮಿಯಂ ಮೊತ್ತ ಪಾವತಿಸಲು ಸ್ಥಳೀಯ ಪ್ರಾಥಮಿಕ ಸಹಕಾರ ಸಂಘಗಳ ಕಛೇರಿಗಳಿಗೆ ಬಂದು ಅಗತ್ಯ ದಾಖಲೆಗಳನ್ನು ನೀಡುತ್ತಿದ್ದಾರೆ . ಆದರೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡದ ರೈತರ ಜಮೀನಿನ ವಿವರ ತೋರಿಸದೇ ಇರುವುದರಿಂದ ಕಳೆದ ಬಾರಿ ಬೆಳೆ ಸಮೀಕ್ಷೆ ಮಾಡದ ಹಲವರು ಅಡಿಕೆ , ಕರಿಮೆಣಸು ಬೆಳೆಯುವ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳ ಎಷ್ಟೋ ಮಂದಿ ರೈತರ ಮನೆಯಲ್ಲಿ ಸ್ಮಾರ್ಟ್ ಪೋನ್ ಇರುವುದಿಲ್ಲ . ಕೆಲವೊಂದು ಕಡೆಗಳಲ್ಲಿ ನೆಟ್ವರ್ಕ್ ಸಮಸ್ಯೆ , ಇನ್ನೂ ಕೆಲವು ರೈತರಿಗೆ ಸ್ಮಾರ್ಟ್ ಪೋನ್ ಇದ್ದರೂ ಬೆಳೆ ಸಮೀಕ್ಷೆ ಮಾಡಲು ತಿಳಿಯುವುದಿಲ್ಲ . ಕೃಷಿ ಇಲಾಖೆಯಿಂದ ನಿಯೋಜನೆಗೊಂಡ ಖಾಸಗಿ ವ್ಯಕ್ತಿಗಳು ಸಹ ರೈತರ ಬೆಳೆಸಮೀಕ್ಷೆ ಸಮರ್ಪಕವಾಗಿ ಮಾಡಿರುವುದಿಲ್ಲ.

ಈ ಹಿನ್ನಲೆಯಲ್ಲಿ 2025-26 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರಯೋಜನವನ್ನು ರಾಜ್ಯದ ಎಲ್ಲಾ ರೈತರು ಪಡೆಯುವಂತಾಗಲೂ ಬೆಳೆ ಸಮೀಕ್ಷೆ ಮಾಡದಿರುವ ರೈತರ ಜಮೀನಿಗೆ ಸಹ ಅವಕಾಶ ಮಾಡಿಕೋಡಬೇಕು ಹಾಗೂ ಇಲಾಖಾ ವತಿಯಿಂದಲೇ ಈ ವರ್ಷ ಬೆಳೆ ಸಮೀಕ್ಷೆ ಮಾಡಿಸಿ ರೈತರಿಗೆ ಅವಕಾಶ ಮಾಡಿ ಕೊಡಬೇಕೇಂದು ಸೂಕ್ತ ನಿರ್ದೇಶನ ನೀಡುವಂತೆ ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *