ಮಂಗಳೂರು: ಫೇಸ್ಬುಕ್ ನ ಟ್ರೋಲ್ ಪೇಜ್ ಗಳಲ್ಲಿ ಕಮೆಂಟ್ ಮಾಡುತ್ತಿದ್ದ ವ್ತಕ್ತಿಗಳಿಗೆ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯಿಸಿ ಕರೆಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲೆಯ ಬಾರ್ ಲೈನ್ ರಸ್ತೆ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕೋತಿತೋಪು ನಿವಾಸಿ ಅರುಣ್ ಟಿ (27) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸೈಬರ್ ಪೊಲೀಸ್ ಸುಶೀಲ್ ಕುಮಾರ್ ಎಂದು ಪರಿಚಯಿಸಿ ನಿಮ್ಮ ಮೇಲೆ ದೂರು ದಾಖಲಾಗಿದೆ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಈ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯಿಂದ 1,23,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಜುಲೈ 15 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 37/2025 ಕಲಂ. 66 (ಸಿ) 66 (ಡಿ) ಐಟಿ ಕಾಯ್ದೆ ಹಾಗೂ ಕಲಂ 112,308(2), 318(4) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು. ಆರೋಪಿತನ ವಿರುದ್ದ ಸೈಬರ್ ಪೋರ್ಟಲ್ ನಲ್ಲಿ ಒಟ್ಟು 11 ದೂರುಗಳು ದಾಖಲಾಗಿದೆ.



