Breaking
22 Mar 2026, Sun

ದಿವಂಗತ ವಿಠಲ ಶೆಟ್ಟಿಯವರಿಗೆ ನುಡಿ ನಮನ

ವಿಟ್ಲ: ಇತ್ತೀಚೆಗೆ ನಿಧರಾದ ವಿಟ್ಲದ ಜನಪ್ರಿಯ ಮುಖ್ಯೋಪಾಧ್ಯಾಯ ವಿಠಲ ಶೆಟ್ಟಿಯವರಿಗೆ ನುಡಿ ನಮನವನ್ನು ಚಂದಳಿಕೆ ಶಾಲೆಯಲ್ಲಿ ಜರಗಿಸಲಾಯಿತು.

ವಿದ್ಯಾವರ್ಧಕ ಸಂಘ ಚಂದಳಿಕೆ ಶಾಲೆ, ಎಸ್.ಡಿ.ಎಂ.ಸಿ ಚಂದಳಿಕೆ ಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಕಲಾಲೋಕ ಬಂಟ್ವಾಳ ತಾಲೂಕು ಘಟಕ ಇವರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಮೌನ ಪ್ರಾರ್ಥನೆ, ವಿಠಲಶೆಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರಗಿದುವು.
ದಿವಂಗತರ ಬಗ್ಗೆ ಮಾತನಾಡಿದ ಮಕ್ಕಳ ಕಲಾ ಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಳರು ವಿಠಲ ಶೆಟ್ಟರು ಸಾತ್ವಿಕ ಜೀವನ ನಡೆಸಿದ ಹೃದಯವಂತರಾಗಿದ್ದರು.

ಶಿಕ್ಷಣ ಪ್ರೇಮಿ ಮತ್ತು ಕಲಾ ಪ್ರೇಮಿಯಾಗಿದ್ದರು. ಶಾಲೆಗಳ ಅಥವಾ ಇತರ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಸಾಧನದಲ್ಲಿ ಸಹಕರಿಸುತ್ತಿದ್ದರು. ಅವರು ಅನೇಕ ಮಕ್ಕಳಿಗೆ ಭರತ ನಾಟ್ಯ ಗುರುವೂ ಹೌದು ಎಂದರು.

ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ ಬಾಯಾರು ತನ್ನ ಮತ್ತು ವಿಠಲ ಶೆಟ್ಟರ ಒಡನಾಟವನ್ನು ಸ್ಮರಿಸಿ ಮಾತನಾಡುತ್ತಾ ಅವರ ಬದುಕು ಮುಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದರು. ‌
ಅಧ್ಯಕ್ಷತೆ ವಹಿಸಿದ ಚಂದಳಿಕೆ ವಿದ್ಯಾ ವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ ಮಾತಾನಾಡುತ್ತಾ ಚಂದಳಿಕೆ ಶಾಲೆಯಲ್ಲಿ ವಿಠಲ ಶೇಟ್ಟಿಯವರು ಸಲ್ಲಿಸಿದ ಸೇವೆಯ ಅವಧಿಯನ್ನು ಕೊಂಡಾಡಿದರು. ವಿಠಲ ಶೇಟ್ಟರ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯ ಎಂದು ಹೇಳಿದರು.

ಶಾಲಾ ಎಸ್‌ಡಿಎಂಸಿ ಆಧ್ಯಕ್ಷೆ ಸುಮತಿ ದೇಜಪ್ಪ ನಿಡ್ಯ, ಮಕ್ಕಳ ಕಲಾ ಲೋಕದ ಖಜಾಂಚಿ ಶ್ರೀಪತಿ ನಾಯಕ್‌ ನಾಟೆಕಲ್ಲು, ನಿಕಟಪೂರ್ವ ಉಪಾಧ್ಯಕ್ಷ ನೆಡ್ಲೆ ಶಿವರಾಮ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ಚಂದಳಿಕೆ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಪ್ರಸ್ತಾಪಿಸಿ ಸ್ವಾಗತಿಸಿದರು, ಮಕ್ಕಳ ಕಲಾ ಲೋಕದ ಕಾರ್ಯದರ್ಶಿ ಪುಷ್ಪಾ ಎಚ್‌ ವಂದಿಸಿದರು. ದೈಹಿಕ ಶಿಕ್ಷಕ ಸುರೇಶ ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *