Breaking
22 Mar 2026, Sun

ರಾಯಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಬ್ಯಾಗ್‍‌ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆ ಮತ್ತು ದಾನಿಗಳ ನೆರವಿನಲ್ಲಿ ಉಚಿತ ಪುಸ್ತಕ ಮತ್ತು ಸಮವಸ್ತ್ರ ಸಹಿತ ಬ್ಯಾಗ್ ಮತ್ತಿತರ ಸಾಮಾಗ್ರಿ ಭಾನುವಾರ ವಿತರಿಸಲಾಯಿತು.

ಸುಮಾರು 60 ವರ್ಷಗಳ ಹಿಂದೆ ಸ್ಥಳೀಯ ಕೃಷಿಕರೊಬ್ಬರು ಆರಂಭಿಸಿದ್ದ ಇಲ್ಲಿನ ರಾಯಿ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬಾರದು ಎಂಬ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳು ವಿವಿಧ ಕೊಡುಗೆ ಹಸ್ತಾಂತರಿಸಿ ಗಮನ ಸೆಳೆದಿದ್ದಾರೆ.

ಬೆಂಗಳೂರು ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಇ ಡಿ ಆರ್ ಟಿ ಸಂಸ್ಥೆ ಸೇರಿದಂತೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ, ನಿವೃತ್ತ ಮುಖ್ಯಶಿಕ್ಷಕ ಕೆ. ರಮೇಶ ನಾಯಕ್ ರಾಯಿ, ಉದ್ಯಮಿ ಸುನಿಲ್ ಗೌಡ ಮುದ್ದಾಜೆ, ಕೃಷಿಕ ದಂಪತಿ ಜಯಂತಿ ಮತ್ತು ಹರಿಯಪ್ಪ ಶೆಟ್ಟಿ ಐತೇರಿ ಮತ್ತಿತರರು ಸೇರಿಕೊಂಡು ವಿದ್ಯಾರ್ಥಿಗಳಿಗೆ ರೂ 1 ಲಕ್ಷ ವೆಚ್ಚದಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಕೊಡೆ, ಬ್ಯಾಗ್, ಕಲರ್ ಬಾಕ್ಸ್, ಪೆನ್, ಪೆನ್ಸಿಲ್ ಹೀಗೆ ವರ್ಷವಿಡೀ  ಬಳಕೆಗೆ ಅಗತ್ಯವಿರುವಷ್ಟು ಶೈಕ್ಷಣಿಕ ಸಾಮಾಗ್ರಿಗಳನ್ನು ಭಾನುವಾರ ವಿತರಿಸಿದ್ದಾರೆ. ಇದೇ ವೇಳೆ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳ  ಹೆಸರಿನಲ್ಲಿ ತಲಾ ರೂ 1 ಸಾವಿರ ಮೊತ್ತದನಗದು ಠೇವಣಿ ಇಡುವ ಮೂಲಕ ಇಲ್ಲಿನ ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಗಮನ ಸೆಳೆದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ರಾಯಿ, ಪ್ರಗತಿಪರ ಕೃಷಿಕ ಜಿ.ರಾಮಸುಂದರ ಗೌಡ, ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಮಿತ್ ಶಿವನಗರ ಶುಭ ಹಾರೈಸಿದರು.

ಸಹಶಿಕ್ಷಕಿ ಬೇಬಿ ಅರಳ ಸ್ವಾಗತಿಸಿ, ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಪ್ರಾಸ್ತಾವಿಕ ಮಾತನಾಡಿದರು. ಗೌರವ ಶಿಕ್ಷಕಿ ನಿಖಿತಾ ವಂದಿಸಿದರು. ಶಿಕ್ಷಕ ಸಿದ್ದಪ್ಪ ಕಡೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *