ಪುತ್ತೂರು: ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಸ್ವಾಮಿ ಕಲಾಮಂದಿರ ಆಶ್ರಯದಲ್ಲಿ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಜೂ. 1 ರಿಂದ 7 ವರೆಗೆ ಸಂಜೆ ೬ರಿಂದ ೮ರತನಕ ಬೈಪಾಸ್ ರಸ್ತೆಯ ದರ್ಶನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿಯ ಬಲರಾಮ ಆಚಾರ್ಯ ಮತ್ತು ಬಹುವಚನಂ ಸಂಸ್ಥೆಯ ಡಾ. ಶ್ರೀಶ ಕುಮಾರ್ ಎಂ. ಕೆ. ಹೇಳಿದರು.

ಪುತ್ತೂರಿನಲ್ಲಿ ಮೊದಲ ಬಾರಿಗೆ ಶ್ರೀ ವೇದವ್ಯಾಸ ವಿರಚಿತ ಪುರಾಣರಾಜ ಶ್ರೀಮದ್ಭಾಗವತ ಪ್ರವಚನವನ್ನು ಖ್ಯಾತ ವಾಗ್ಮಿ ವೀಣಾ ಬನ್ನಂಜೆ ನಡೆಸಲಿದ್ದಾರೆ. ಸನಾತನ ಧರ್ಮದ ಅರಿವನ್ನು ನೀಡುವ ನಿಟ್ಟಿನಲ್ಲಿ ಪ್ರವಚನವನ್ನು ಏರ್ಪಡಿಸಲಾಗಿದ್ದು, 6೦೦ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಮುಂದಿನ ಪೀಳಿಗೆಗೆ ವಿಚಾರಗಳನ್ನು ಉಳಿಸಿಕೊಂಡು ಹೋಗುವ ಕಾರ್ಯ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀಮದ್ಭಾಗವತದ ಸಾರವನ್ನು ತಿಳಿಸುವ ಕಾರ್ಯ ನಡೆಯಲಿದ್ದು, ಆಧ್ಯಾತ್ಮದ ಕಡೆಗೆ ಒಲವಿರುವ ಪ್ರತಿಯೊಬ್ಬರು ಪ್ರವಚನದಲ್ಲಿ ಭಾಗವಹಿಸಬಹುದಾಗಿದೆ. ಜನರ ಆಸಕ್ತಿಯನ್ನು ಗಮನಿಸಿಕೊಂಡು ಪ್ರವಚನವನ್ನು ಮುಂದಿನ ದಿನ ಮುಂದುವರಿಸುವ ನಿರ್ಧಾರ ಮಾಡಲಾಗುವುದು.
ಜೂ.1 ರಂದು ಸಾಯಂಕಾಲ 5.3೦ಕ್ಕೆ ಉದ್ಘಾಟನೆಯನ್ನು ನಿವೃತ್ತ ಸರ್ಕಾರಿ ವೈದ್ಯ ಡಾ. ರಘು ನಡೆಯಲಿದ್ದು, ಅಧ್ಯಕ್ಷತೆಯನ್ನು ಜಿ.ಎಲ್. ಸಮೂಹ ಸಂಸ್ಥೆಯ ಬಲರಾಮ ಆಚಾರ್ಯ ವಹಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ ಭಾಗವಹಿಸಲಿದ್ದಾರೆ. ಜೂ.7 ರಂದು ಸಾಯಂಕಾಲ 5.3೦ಕ್ಕೆ ನಡೆಯುವ ಭಗವದರ್ಪಣಾ ಕಾರ್ಯಕ್ರಮ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಹಿಸಲಿದ್ದಾರೆ. ಭಗವದರ್ಪಣೆಯ ಮಾತನ್ನು ಚಿಂತಕ ಲಕ್ಷ್ಮೀಶ ತೋಳ್ಪಾಡಿ ನಡೆಸಲಿದ್ದಾರೆ. ಬಿರುಮಲೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ, ಬಹುವಚನಂ ಸಂಸ್ಥೆಯ ಡಾ. ಶ್ರೀಶ ಕುಮಾರ್ ಎಂ. ಕೆ. ಉಪಸ್ಥಿತರಿದ್ದರು.


