ಮಂಗಳೂರು: ಲಂಚ ಸ್ವೀಕರಿಸುತ್ತಿರುವಾಗಲೇ ಇಬ್ಬರು ಸರಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಮತ್ತು ಖಜಾನೆಯ ಎಫ್ಡಿಎ ಬಸವಗೌಡ ಎಂಬವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು.
ಇವರು ಗ್ರಾಮ ಪಂಚಾಯತ್ ಮಾಜಿ ಕಾರ್ಯದರ್ಶಿಯಿಂದ ಲಂಚ ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ವೊಂದರಲ್ಲಿ ಕಾರ್ಯದರ್ಶಿಯಾಗಿದ್ದ ದೂರುದಾರರು 2023ರ ಅಕ್ಟೋಬರ್ ನಲ್ಲಿ ವಯೋನಿವೃತ್ತಿ ಹೊಂದಿದ್ದರು. 2024ರ ಜೂನ್ನಲ್ಲಿ ಅವರ ಪತಿ ನಿಧನರಾಗಿದ್ದರು. ಗಂಡನ ಮರಣ ಉಪದಾನದ ಬಗ್ಗೆ ದೂರುದಾರರು ಖಜಾನೆಯ ಕಚೇರಿಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರಲಿಲ್ಲ

ಈ ವೇಳೆ ಖಜಾನೆಯ ಮುಖ್ಯಲೆಕ್ಕಿಗ ಭಾಸ್ಕರ್ 5,000 ರೂಪಾಯಿ ಮತ್ತು ಖಜಾನೆಯ ಎಫ್ಡಿಎ ಬಸವಗೌಡ ಬಿ.ಎನ್. 5,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.


