ಮಾಣಿ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ‘ಮನೆ ಮನೆಗೆ ಗುರುತತ್ವ ಸಂದೇಶ’ ಕಾರ್ಯಕ್ರಮವು ಸೆ. 8ರಂದು ಪೆರಾಜೆ ಗ್ರಾಮದ ರೂಪಶ್ರೀ ದಿನೇಶ್ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಸಂದೇಶವು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ, ಇಡೀ ಸಮಾಜದ ಉನ್ನತಿ ಹಾಗೂ ಮಾನವೀಯ ಬದುಕಿಗೆ ದಾರಿದೀಪವಾಗಿದೆ ಎಂದರು.

ದೇವರ ನಾಡು ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಅಂದಿನ ಸಾಮಾಜಿಕ ಅಸಮಾನತೆ, ಅಜ್ಞಾನ, ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಶಿಕ್ಷಣವೇ ಸಮಾಜದ ಪ್ರಗತಿಯ ಮೂಲ ಹಾಗೂ ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ ಎಂಬ ಸಂದೇಶವನ್ನು ಸಾರಿದರು ಎಂದು ಹೇಳಿದರು.

“ನಾರಾಯಣ ಗುರುಗಳು ನಮಗೆ ದೇವಸ್ಥಾನಗಳನ್ನು ಮಾತ್ರ ನೀಡಲಿಲ್ಲ. ದೇವಸ್ಥಾನದ ಮೂಲಕ ಒಗ್ಗಟ್ಟು, ಒಗ್ಗಟ್ಟಿನ ಮೂಲಕ ಸಂಘಟನೆ ಹಾಗೂ ಸಂಘಟನೆಯ ಮೂಲಕ ಸಮಾಜದ ಉನ್ನತಿಯ ದಾರಿಯನ್ನು ತೋರಿಸಿದರು. ಆ ದಾರಿಯಲ್ಲಿ ಸಾಗುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ರೇಣುಕಾ ಕಣಿಯೂರು ಅಭಿಪ್ರಾಯಪಟ್ಟರು.

ಯುವವಾಹಿನಿ ಮಾಣಿ ಘಟಕವು ನಾರಾಯಣ ಗುರುಗಳ ಸಂದೇಶವನ್ನು ಮನೆಮನೆಗೆ ತಲುಪಿಸುವುದು, ಯುವಜನರನ್ನು ಸಂಘಟಿಸುವುದು, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಗೆ ಪ್ರೋತ್ಸಾಹ ನೀಡುವುದು ಮತ್ತು ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು. ಅವರು ಸ್ವಾಗತಿಸಿದರು. ನಾರಾಯಣ ಗುರುತತ್ವ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ವಂದಿಸಿದರು. ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.





