ವಿಟ್ಲ: ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ‘ಇಟ್ಟೆಲಾಯನೊ’ ಬೃಹತ್ ಸಂಖ್ಯೆಯ ಭಕ್ತ ಜನ ಸಾಗರದ ಮಧ್ಯೆ ಮಂಗಳವಾರ ರಾತ್ರಿ ನಡೆಯಿತು.
ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಯಿತು.
ಮಹಾರಥೋತ್ಸವದ ಮೊದಲು ಅತ್ಯಾಕರ್ಷಕವಾದ ಸಿಡಿಮದ್ದು ಪ್ರದರ್ಶನ ನಡೆಯಿತು. ವಿಟ್ಲ ಸೀಮೆಗೊಳಪಟ್ಟ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಹಾಗೂ ಪರವೂರ ಸಹಸ್ರಾರು ಭಕ್ತರು ಈ ಪುಣ್ಯ ಕ್ಷಣಗಳನ್ನು ಆಸ್ವಾದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉರಿಮಜಲು ಮಕ್ಕಳ ತಂಡದಿಂದ ‘ಸ್ವರ ತರಂಗ ‘ ಸುಗಮ ಸಂಗೀತ, ಕು.ದ್ವಿತಿ ಶೆಟ್ಟಿ ಪ್ರಸ್ತುತ ಪಡಿಸುವ ‘ನೃತ್ಯಾರ್ಪಣಂ’ ಪ್ರದರ್ಶನಗೊಂಡಿತು.
ವಿಟ್ಲ ಸರಕಾರಿ ಪ್ರೌಢಶಾಲೆಯ ವಠಾರದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲ್ಕಿ ಅವರಿಂದ ‘ಬಂಟನ ಬಲಿ ಸುತ್ತು’ ಬಯಲಾಟ ಪ್ರದರ್ಶನಗೊಂಡಿತು.




