Breaking
14 Aug 2026, Fri

ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಪರಿಚಯಿಸಿದ ರೋಟರಿ ಕ್ಲಬ್ ಬಂಟ್ವಾಳ ಟೌನ್‌ನ ಆಟಿದ ಕೂಟ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ತುಳುನಾಡಿನ ಆಟಿ ತಿಂಗಳ ವಿಶೇಷತೆಯನ್ನು ಸಾರುವ ‘ಆಟಿದ ಕೂಟ’ ಕಾರ್ಯಕ್ರಮವು ಆಗಸ್ಟ್ 13ರಂದು ಸಂಜೆ ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಹಾಲ್‌ನಲ್ಲಿ ಸಂಭ್ರಮದಿಂದ ನಡೆಯಿತು.

ಕ್ಲಬ್ ಅಧ್ಯಕ್ಷ ರೋ. ಹಂಝ ಬಸ್ತಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಗೂ ರಂಗ ಕಲಾವಿದ ರೋ. ರಾಜೇಶ್ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತುಳುನಾಡಿನ ಆಟಿ ತಿಂಗಳ ವೈಶಿಷ್ಟ್ಯ, ಅದರೊಂದಿಗೆ ಬೆಸೆದುಕೊಂಡಿರುವ ಸಂಪ್ರದಾಯಗಳು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಕುರಿತು ಮಾತನಾಡಿದರು.

ಅಸಿಸ್ಟೆಂಟ್ ಗವರ್ನರ್ ರೋ. ಶಂನ್ಫತ್ ಶರೀಫ್ ಹಾಗೂ ನಿಕಟಪೂರ್ವ ಅಧ್ಯಕ್ಷ ರೋ. ವಚನ್ ಶೆಟ್ಟಿ ಅವರು ಆಟಿ ತಿಂಗಳ ಮಹತ್ವ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಮಾತನಾಡಿದರು.

ಅಧ್ಯಕ್ಷ ರೋ. ಹಂಝ ಬಸ್ತಿಕೋಡಿ ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕ್ಲಬ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ರೋ. ಮನೋಜ್ ಕನಪಾಡಿ ವಂದಿಸಿದರು. ರೋ. ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ರೋ. ಸುಧಾಕರ್ ಸಾಲ್ಯಾನ್ ಮನರಂಜನಾ ಹಾಗೂ ಆಟೋಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಹಾಗೂ ಆಟೋಟ ಸ್ಪರ್ಧೆಗಳು ನಡೆದಿದ್ದು, ವಿಜೇತರು ಸೇರಿದಂತೆ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕ್ಲಬ್ ಸದಸ್ಯರು ಹಾಗೂ ಕುಟುಂಬಸ್ಥರು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸದಸ್ಯರು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿ ತಂದಿದ್ದ ವಿವಿಧ ಆಟಿ ಖಾದ್ಯಗಳ ಸವಿಯನ್ನು ಎಲ್ಲರೂ ಸವಿದರು. ಈ ಮೂಲಕ ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ತುಳುನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಂದೇಶವನ್ನು ‘ಆಟಿದ ಕೂಟ’ ಸಾರಿತು.

Leave a Reply

Your email address will not be published. Required fields are marked *