ಉಡುಪಿ: ಆಗುಂಬೆ ಘಾಟ್ ನಲ್ಲಿ ಭಾರೀ ಮಳೆ ಹಾಗೂ ನಿರಂತರ ಘನ ವಾಹನಗಳ ಸಂಚಾರದಿಂದ ರಸ್ತೆ ಬದಿಯಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಕರ್ನಾಟಕ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಈ ಕುರಿತು ಆದೇಶ ಹೊರಡಿಸಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು ತೀರ್ಥಹಳ್ಳಿ–ನಗರ–ಕುಂದಾಪುರ ಮಾರ್ಗವಾಗಿ ಉಡುಪಿಗೆ ತೆರಳಬೇಕು.
ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ–ಎಸ್.ಕೆ. ಬಾರ್ಡರ್ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.

ಹಾಗೆಯೇ ನರಸಿಂಹರಾಜಪುರದಿಂದ ಉಡುಪಿಗೆ ಆಗಮಿಸುವ ವಾಹನಗಳು ಕೊಪ್ಪ–ಜಯಪುರ–ಬಾಳೆಹೊಳೆ–ಕಳಸ–ಕುದುರೆಮುಖ–ಎಸ್.ಕೆ. ಬಾರ್ಡರ್ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.


