ಉಡುಪಿ: ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನದಿಗೆ ಹಾರಿದ ಯುವಕನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಉದ್ಯಾವರ ಪಿತ್ರೋಡಿ ನಿವಾಸಿಗಳಾದ ರಮೇಶ್ ಹಾಗೂ ಪ್ರಮೋದಿನಿ ಶೆಟ್ಟಿ ಅವರ ಪುತ್ರ ಹರ್ಷಿತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕ್ರಿಕೆಟ್ ಆಡಲು ಬೋಳಾರುಗುಡ್ಡೆ ಮೈದಾನಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಹರ್ಷಿತ್ ಬಳಿಕ ಮನೆಗೆ ಮರಳಿರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ದ್ವಿಚಕ್ರ ವಾಹನ ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ಪತ್ತೆಯಾಗಿತ್ತು.

ಈ ಹಿನ್ನೆಲೆ ಸ್ಥಳೀಯರು ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ಅವರ ನೇತೃತ್ವದಲ್ಲಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಸಂಜೆಯ ವೇಳೆಗೆ ಹರ್ಷಿತ್ ಅವರ ಮೃತದೇಹ ಪತ್ತೆಯಾಗಿದೆ.

ಹರ್ಷಿತ್ ಮಲ್ಪೆಯ ಸೊಸೈಟಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


