ಬೆಂಗಳೂರು: ಬಿಎಂಟಿಸಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಯ ಚಿನ್ನದ ಕಿವಿಯೋಲೆ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಕನೈ ಅಧಿಕಾರಿ (40) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನದ ಕಿವಿಯೋಲೆ ವಶಪಡಿಸಿಕೊಳ್ಳಲಾಗಿದೆ.

ಜೂನ್ 14ರಂದು ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರು ನಗರದ ಹೊಸೂರು ರಸ್ತೆಯ ಜಾನ್ಸನ್ ಮಾರ್ಕೆಟ್ ಸಮೀಪದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕಳೆದ 6 ತಿಂಗಳಿಂದ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ವೇಳೆ ನೀಲಸಂದ್ರದ ಮುನೇಗೌಡ ಗಾರ್ಡನ್ ನಿವಾಸಿ ಅಮೀರಾ ಎಂಬವರು ಬಿಎಂಟಿಸಿ ಬಸ್ಗಾಗಿ ಕಾಯುತ್ತಿದ್ದರು.

ಈ ವೇಳೆ ಆರೋಪಿ ಮಹಿಳೆಯ ಬಳಿ ಬಂದು, “ನೀಲಸಂದ್ರಕ್ಕೆ ಬಸ್ ಬರುತ್ತದೆಯೇ?” ಎಂದು ಪ್ರಶ್ನಿಸಿದ್ದ. ಮಹಿಳೆ ಹೌದು ಎಂದು ಉತ್ತರಿಸಿದ ಬಳಿಕ, ಕೆಲ ಹೊತ್ತಿನ ನಂತರ ಅವರ ಪಕ್ಕದಲ್ಲಿ ಕುಳಿತು ಏಕಾಏಕಿ ಕಿವಿಯೋಲೆ ಕಸಿದು ಪರಾರಿಯಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






