ಬಂಟ್ವಾಳ: ಬಿಸಿರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ನಾಗರಾಜ್ ಅವರಿಗೆ ಸೇರಿದ ನಾಗ ಕ್ಯಾಂಟೀನ್ ಹಿಂಭಾಗದಲ್ಲಿ ದೋಸೆ ತಯಾರಿಸಲು ಬಳಸುತ್ತಿದ್ದ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಘಟನೆಯಲ್ಲಿ ದೋಸೆ ತಯಾರಿಸುತ್ತಿದ್ದ ಕ್ಯಾಂಟೀನ್ ಸಿಬ್ಬಂದಿ ವಿಶ್ವನಾಥ್ ಅವರಿಗೆ ಬೆಂಕಿಯ ಕೆನ್ನಾಲಿಗೆ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ, ಕ್ಯಾಂಟೀನ್ ಮಾಲಕರ ಸಹೋದರ ಹರೀಶ್ ಅವರಿಗೂ ಅಲ್ಪ ಪ್ರಮಾಣದ ಗಾಯಗಳಾಗಿವೆ.

ಘಟನೆ ನಡೆದ ಸಮಯದಲ್ಲಿ ಕ್ಯಾಂಟೀನ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುವ ಹೊತ್ತಾಗಿದ್ದು, ಸಮೀಪದಲ್ಲೇ ರಕ್ತೇಶ್ವರಿ ದೇವಸ್ಥಾನ ಹಾಗೂ ಹಲವು ಸರ್ಕಾರಿ ಕಚೇರಿಗಳು ಇರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸಮಯೋಚಿತ ಕ್ರಮದಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದೆ.

ಅನಿಲ ಸೋರಿಕೆಯಿಂದ ಉಂಟಾದ ಬೆಂಕಿಯನ್ನು ಸ್ಥಳೀಯರು ಆರಂಭದಲ್ಲಿ ನಂದಿಸಲು ಪ್ರಯತ್ನಿಸಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದು ಅಪಾಯ ತಪ್ಪಿಸಿದರು.
ಘಟನೆಯಿಂದ ಕೆಲಕಾಲ ಆತಂಕ ಉಂಟಾದರೂ, ಪ್ರಸ್ತುತ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.






