ಬಂಟ್ವಾಳ: ಸನಾತನ ಹಿಂದೂ ಧರ್ಮದ ಪರಿಪಾಲನೆ ಹಾಗೂ ರಾಷ್ಟ್ರೀಯ ವಿಚಾರಧಾರೆಯೊಂದಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ಭಾರತದಲ್ಲಿ ಅಧಿಕಾರದ ಜವಾಬ್ದಾರಿ ವಹಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಜಿ ದೀರ್ಘಾವಧಿಯ ಯಶಸ್ವಿ ಆಡಳಿತ ನಡೆಸುತ್ತಿದ್ದಾರೆ.

ದೇಶದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ಅವರು, “ಸರ್ವರಿಗೂ ಸಮಪಾಲು” ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸುತ್ತಿದ್ದು, ಇನ್ನಷ್ಟು ಕಾಲ ದೇಶಸೇವೆಗೆ ಶಕ್ತಿ ದೊರಕಲಿ ಹಾಗೂ ಜಗತ್ತಿನ ಮಹಾನ್ ಶಕ್ತಿಯಾಗಿ ಬೆಳಗಲಿ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಬಿಜೆಪಿ ಕಾರ್ಯಕರ್ತರ ಪರವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೋದಿಜಿಯವರ ಆಯುರಾರೋಗ್ಯ ವೃದ್ಧಿಯಾಗಲಿ ಹಾಗೂ ಅವರ ಮುಂದಿರುವ ಎಲ್ಲ ವಿಘ್ನಗಳಿಗೆ ಪರಿಹಾರ ದೊರಕಲಿ ಎಂಬ ಉದ್ದೇಶದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ ಮಾವಿನಕಟ್ಟೆ ಅವರು ಪೂಜೆ ನೆರವೇರಿಸಿ ಪ್ರಧಾನಮಂತ್ರಿಗೆ ಶುಭ ಹಾರೈಸಿದರು.
ಈ ಹಿನ್ನೆಲೆಯಲ್ಲಿ ಕುಕ್ಕಿಪಾಡಿ ಹಾಗೂ ಎಲಿಯನಡುಗೋಡು ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ವಾಮದಪದವು ಸಮೀಪದ ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕುಕ್ಕಿಪಾಡಿ ಶಕ್ತಿ ಕೇಂದ್ರದ ಪ್ರಮುಖ ಯೋಗೀಶ್ ಆಚಾರ್ಯ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್, ಬೂತ್ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ ಹಾಗೂ ಪುಷ್ಪರಾಜ್ ಪೂಜಾರಿ, ಬೂತ್ ಕಾರ್ಯದರ್ಶಿ ಶಿವಾನಂದ ಪೂಜಾರಿ, ಪ್ರಭಾತ್ ನಾಯಕ್, ಪ್ರವೀಣ್ ಶೆಟ್ಟಿ, ಪಕ್ಷದ ಪ್ರಮುಖರಾದ ಹರೀಶ್ ಪೂಜಾರಿ, ರಾಜು ಪೂಜಾರಿ, ಯಶವಂತ ಆಚಾರ್ಯ ಉಪ್ಪಿರ, ಪೂವಪ್ಪ ಪೂಜಾರಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





