ಬೀದರ್: ಜಿಲ್ಲಾ ಸರ್ಕಾರಿ ಆಸ್ಪತ್ರೆಯಾದ ಬ್ರಿಮ್ಸ್ ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆದಿತ್ಯ ತಜಲಾಪುರ, ವಿನೋದ್ ಚಾಂಬೋಲ್, ಗೋವಿಂದ್ ಬೆನಕನಳ್ಳಿ, ಅನಿಲ್ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಜಲಾಪುರ ಹಾಗೂ ಪವನ್ ಚಾಂಬೋಲ್ ಎಂದು ಗುರುತಿಸಲಾಗಿದೆ.

ಮೇ 21ರ ಗುರುವಾರ ತಡರಾತ್ರಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವಿಜಯ್ ಸಿಂಗ್ ಎಂಬಾತನನ್ನು ಸ್ನೇಹಿತರು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಒಪಿಡಿ ಚೀಟಿ ವಿಚಾರವಾಗಿ ವೈದ್ಯ ಡಾ. ತುಕರಾಮ್ ಭಾಲ್ಕೆ ಅವರೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಆರೋಪಿಗಳು ತುರ್ತು ಚಿಕಿತ್ಸಾ ಘಟಕದೊಳಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವೈದ್ಯರನ್ನು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿದಲ್ಲದೆ, “ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು, ಇಲ್ಲವಾದರೆ ಜೀವಂತವಾಗಿ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಬ್ರಿಮ್ಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ವೈದ್ಯರನ್ನು ಚಿಕಿತ್ಸೆಗೆ ಕರೆದೊಯ್ದರು.

ಘಟನೆಯ ನಂತರ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಗಾಯಗೊಂಡ ವೈದ್ಯರನ್ನು ಚಿಕಿತ್ಸೆಗೆ ದಾಖಲಿಸಿದರು.

ಈ ಘಟನೆ ಖಂಡಿಸಿ 500ಕ್ಕೂ ಹೆಚ್ಚು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಡಾ. ತುಕರಾಮ್ ಭಾಲ್ಕೆ ನೀಡಿದ ದೂರಿನ ಮೇರೆಗೆ ನ್ಯೂ ಟೌನ್ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು 7 ಮಂದಿಯನ್ನು ಬಂಧಿಸಿದ್ದಾರೆ.


