ಕಾಸರಗೋಡು: ಯುವಕನೊಬ್ಬನ ಕೊಲೆ ಪ್ರಕರಣದ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನುಕುಂಬಳೆಯ ಕೋಟೆಕ್ಕಾರ್ ನಿವಾಸಿ ಶ್ರೀನಿವಾಸ್ (39) ಎಂದು ಗುರುತಿಸಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಬಪಲಿಪೋಣ ನಿವಾಸಿ ಮತ್ತು ಕೋಳಿ ಸಾಗಣೆ ವಾಹನದ ಚಾಲಕ ಸಫಾಯತ್ (30) ಎಂದು ತಿಳಿದುಬಂದಿದೆ.

ಏಪ್ರಿಲ್ 28ರಂದು ಮಧ್ಯಾಹ್ನ, ಸೀತಾಂಗೋಲಿಯ ಪಾನೀಯಗಳ ಅಂಗಡಿಯಿಂದ ಮದ್ಯ ಖರೀದಿಸಿದ ಸಫಾಯತ್ ಮತ್ತು ಶ್ರೀನಿವಾಸ್ ಅವರು ಕಟ್ಟಡದ ಹಿಂದಿನ ಏಕಾಂತ ಸ್ಥಳಕ್ಕೆ ತೆರಳಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಮೊದಲೇ ಅಲ್ಲಿದ್ದ ಇತರ ಇಬ್ಬರು ಸಹಚರರು ಸ್ಥಳದಿಂದ ತೆರಳಿದ ಬಳಿಕ, ಸಫಾಯತ್ ಮತ್ತು ಶ್ರೀನಿವಾಸ್ ನಡುವಿನ ಘರ್ಷಣೆ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಶ್ರೀನಿವಾಸ್, ಸಫಾಯತ್ ಅವರನ್ನು ನೆಲಕ್ಕೆ ತಳ್ಳಿ, ಸ್ಥಳದಲ್ಲಿದ್ದ ಮರದ ಹಲಗೆಯಿಂದ ಅವರ ತಲೆಗೆ ಹೊಡೆದಿದ್ದಾನೆ.

ತಲೆಗೆ ಬಿದ್ದ ಗಂಭೀರ ಗಾಯದಿಂದ ಸಫಾಯತ್ ಕಿರುಚಾಡಿದ್ದು, ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಘಟನೆಯ ಬಳಿಕ ಪರಾರಿಯಾಗಿದ್ದ ಶ್ರೀನಿವಾಸ್ ಅವರನ್ನು 24 ಗಂಟೆಗಳೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


