ಬಂಟ್ವಾಳ: ಜಿಲ್ಲೆಯ ಹೆದ್ದಾರಿಗಳಲ್ಲಿ ಬೇಕಾಬಿಟ್ಟಿ ಅನಧಿಕೃತ ಟೋಲ್ ಗೇಟ್ ಗಳನ್ನು ನಿರ್ಮಾಣ ಮಾಡಿ ಜನರನ್ನು ಸುಲಿಗೆ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದ್ದು , ಯಾವುದೇ ಕಾರಣಕ್ಕೂ ಜನರನ್ನು ಸುಲಿಗೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ರವರು ಹೇಳಿದರು.

ಅವರು ಇಂದು (ಎ. 28) ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಅಂತರ ನಿಯಮ ಉಲ್ಲಂಘಿಸಿ ಟೋಲ್ ಗೇಟ್ ನಿರ್ಮಾಣದ ವಿರುದ್ಧ ಹಾಗೂ ಬ್ರಹ್ಮರಕೊಟ್ಲು ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಬಿ.ಸಿ ರೋಡ್ ಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೊಟ್ಲು ಟೋಲ್ ಗೇಟ್ ತನಕ ನಡೆಯುವ ಜನಾಂದೋಲನ ನಡಿಗೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ತಲಪಾಡಿ, ಪಡುಬಿದ್ರೆ , ಬ್ರಹ್ಮರಕೊಟ್ಲು ಗಳಲ್ಲಿ ಅಂತರ ನಿಯಮ ಉಲ್ಲಂಘಿಸಿ ಡೋಲ್ ಗೇಟ್ ಗಳು ಕಾರ್ಯಚರಿಸುತ್ತಿದ್ದು, ಇದೀಗ ಬೆಳ್ತಂಗಡಿ ತಾಲೂಕಿನ ಪಣಕಜೆ , ಉಪ್ಪಿನಂಗಡಿ ಸಮೀಪದ ಬಜೆತ್ತೂರು , ಮಂಗಳೂರು ಸಮೀಪದ ವಾಮಂಜೂರಿನಲ್ಲಿ ಹೊಸ ಟೋಲ್ ಗೇಟ್ ಗಳನ್ನು ನಿರ್ಮಾಣ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ನಡುವೆ 60 ಕಿಮೀ ಅಂತರವಿರಬೇಕೆಂಬ ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಅಕ್ರಮಗಳ ಟೋಲ್ ಗೇಟ್ ವಿರುದ್ಧ ನಿರಂತರ ಹೋರಾಟದ ಭಾಗವಾಗಿ ನಾಳೆ ಜನಾಂದೋಲನ ನಡೆಗೆ ಕಾರ್ಯಕ್ರಮ ನಡೆಯಲಿದ್ದು , ಇದರಲ್ಲಿ ಬೆಳ್ತಂಗಡಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಲ, ನಾಗೇಶ್ ಕುಮಾರ್ ಗೌಡ , ಮುಖಂಡರಾದ ಪದ್ಮಶೇಖರ್ ಜೈನ್, ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ಪದ್ಮನಾಭ ಸಾಲಿಯಾನ್, ಅಶ್ರಪ್ ನೆರಿಯ , ನೇಮಿರಾಜ್ ಕಿಲ್ಲೂರು, ಮೆಹಬೂಬ್ ಬೆಳ್ತಂಗಡಿ, ಜಗದೀಶ್ ಬೆಳ್ತಂಗಡಿ , ಅಜರ್ ನಾವೂರು, ನವೀನ ಗೌಡ ಸವಣಾಲು ಮೊದಲಾದವರು ಉಪಸ್ಥಿತರಿದ್ದರು.



