ಕಲ್ಲಡ್ಕ: ಸಮಾಜದಲ್ಲಿ ಶಾಂತಿ ಸಹಬಾಳ್ವೆ ಯಿಂದ ಇರಬೇಕಾದರೆ ಊರಿನ ಸರ್ವಜನರ ಸಹಕಾರ ಅಗತ್ಯತೆ ಇದೆ ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಅವರು ಎಪ್ರಿಲ್ 5 ಭಾನುವಾರ ಬಂಟ್ವಾಳ ತಾಲೂಕಿನ ಅಮ್ಟಾರ್ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಟಾರ್, ಕೆದ್ಲ ಇಲ್ಲಿ ಶಾಲೆಯ ಶತಮಾನ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನ್ನಪೂರ್ಣೇಶ್ವರಿ ಎಜುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಪರಮೇಶ್ವರ ರಾವ್ ವಹಿಸಿದ್ದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಬಹಳಷ್ಟು ಕನ್ನಡ ಶಾಲೆಗಳು ಮಕ್ಕಳು ಇಲ್ಲದೆ ಮುಚ್ಚಿದ್ದು, ಶತಮಾನ ಪೂರೈಸಿದ ಶಾಲೆಯನ್ನು ಉಳಿಸುವ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಅಗತ್ಯತೆ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ರಸ್ತೆಯನ್ನು ವಿಶೇಷ ಮುತುವರ್ಜಿ ವಹಿಸಿ ಕಾಂಕ್ರೀಟಿಕರಣಕ್ಕೆ ಸಹಕರಿಸಿದ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಶತಮಾನ ಸಂಭ್ರಮೋತ್ಸವದ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಶಾಲಾಭಿಮಾನಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಶೋಭಾ ಪ್ರಭು ತಾನು ಪ್ರಾಥಮಿಕ ಶಾಲೆಯಲ್ಲಿ ಕಲಿತ ಸಂಸ್ಕಾರದಿಂದ ತನ್ನ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ.ಶ್ರೀನಿವಾಸ ರಾವ್, ಬಂಟ್ವಾಳ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ್, ಐ ಆರ್ ಟಿ ಸುರೇಖಾ, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜೋತಿ, ಹಿರಿಯ ವಿದ್ಯಾರ್ಥಿಗಳಾದ ಬಾಬು ಗೌಡ, ವಿಠಲ ರೈ, ಮೋನಪ್ಪ ರೈ, ಶಾರದಾ, ಶಾಲಾ ಸಂಚಾಲಕಿ ಕೆ.ಭಾರತಿ ,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯಾವತಿ ಟಿ ಎಸ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು, ಜಯರಾಮರೈ ಬೋಳಂತೂರು, ಜಿ.ಚೆನ್ನಪ್ಪ ಪೂಜಾರಿ, ಎಂ ಗೋಪಾಲಗೌಡ, ಲೂಯಿಸ್ ಡಿಸೋಜ, ಕೆ ಸಲೀಂ, ಕೆ.ಕೃಷ್ಣಮೂರ್ತಿ, ರಾಮ ಜಿ ಎನ್, ಚಿದಾನಂದ ಪ್ರಭು, ಜಿ ಕೃಷ್ಣಪ್ಪ ಪೂಜಾರಿ, ಜಯಂತಿ ಬಿ, ಆನಂದ ನಾಯಕ.ಪಿ , ವಿದ್ಯಾರ್ಥಿ ನಾಯಕ ಪ್ರಣಿತ್ ರಾವ್.ಕೆ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಜಿ ಜಿ.ಸುಲೈಮಾನ್ ಸ್ವಾಗತಿಸಿ, ಸಮಿತಿಯ ಗೌರವ ಸಲಹೆಗಾರರಾದ ಶಶಿಕಲಾ ಪ್ರಾಸ್ತಾವಿಕ ಮಾಡಿ, ಕೋಶಾಧಿಕಾರಿ ಹರೀಶ್ ರಾವ್ ವಂದಿಸಿದರು. ಶ್ರೀಕಾಂತ್ ರಾವ್ ಹಾಗೂ ರಶ್ಮಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.


