ಬೆಳ್ತಂಗಡಿ: ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿರುವ ಲಾಯಿಲ ಗ್ರಾಮದ ಅತ್ಯಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ರಸ್ತೆಯ ಕರುಣಾಮಯ ಕಥೆ. ಇಲ್ಲಿ 80 ಕ್ಕೂ ಹೆಚ್ಚು ಕೇವಲ ದಲಿತ ಕುಟುಂಬಗಳೇ ಇವೆ. ಆದರೆ ಇಲ್ಲಿನ ರಸ್ತೆ ಮಾತ್ರ ಇಂದಿಗೂ ಡಾಮರೀಕರಣವನ್ನೇ ಕಂಡಿಲ್ಲ. ಒಂದು ಕಿಮೀ ಡಾಮರೀಕರಣಗೊಂಡ ರಸ್ತೆಯಲ್ಲಿ ಡಾಮರೀಕರಣದ ಅಸ್ತಿಪಂಜರಗಳು ಕಾಣುತ್ತಿದೆ.

ಲಾಯಿಲ ಗ್ರಾಮದ ಲಾಯಿಲ ಸ್ಮಶಾನದಿಂದ ಹೊಳೆಬದಿ- ಕಾವಟೆ- ಬೆರ್ಕೆ- ಲಾಯಿಲಬೈಲು- ಗಾಣದಕೊಟ್ಯ- ಚಂದ್ಕೂರು ದೇವಸ್ಥಾನದ ತನಕದ ಈ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 80 ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತದೆ. ಇನ್ನೂ 70 ಕ್ಕೂ ಹೆಚ್ಚು ಇತರ ಕುಟುಂಬಗಳು ವಾಸಿಸುತ್ತವೆ. ದಿನನಿತ್ಯ ಈ ರಸ್ತೆಯನ್ನು ನೂರಾರು ಜನರು ವಿದ್ಯಾಭ್ಯಾಸ , ಕೆಲಸ ಕಾರ್ಯಗಳಿಗಾಗಿ ಉಪಯೋಗಿಸುತ್ತಾರೆ. ಆದರೂ ರಸ್ತೆ ಮಾತ್ರ ಪಕ್ಕಾ ಮಣ್ಣಿನದು. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚಾರಿಸುವುದು ಸಾಹಸಮಯವಾಗುತ್ತದೆ. ವಾಹನಗಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಅದರಷ್ಟಕ್ಕೆ ಸಾಗುತ್ತದೆ. ಇನ್ನೂ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಕೆಸರು ನೀರಿನ ಅಭಿಷೇಕ ಗ್ಯಾರಂಟಿ.

ಒಂದು ಕಿಮೀ ರಸ್ತೆಯ ಅಸ್ತಿಪಂಜರದಲ್ಲಿ ಅರ್ಧ ಕಿಮೀ ಕಾಂಕ್ರೀಟಿಕರಣ: ಲಾಯಿಲ ಸ್ಮಶಾನದಿಂದ ಚಂದ್ಕೂರು ತನಕದ ಈ ರಸ್ತೆ ಸುಮಾರು ಮೂರುವರೆ ಕಿಮೀ ಉದ್ದವಿದೆ. ಇದರಲ್ಲಿ ಒಂದು ಕಿಮೀ ರಸ್ತೆ 40 ವರ್ಷದ ಮೊದಲು ಡಾಮರೀಕರಣವಾಗಿತ್ತು. ಅದೀಗ ಡಾಮರು ಎದ್ದು ಹೋಗಿ ಕೇವಲ ಅಸ್ತಿಪಂಜರ ಮಾತ್ರ ಕಾಣುತ್ತಿದೆ. ಇದು ರಸ್ತೆ ಡಾಮರೀಕರಣವಾಗಿತ್ತು ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ಹಲವಾರು ವರ್ಷಗಳ ಬೇಡಿಕೆ ನಂತರ ಇತ್ತೀಚೆಗೆ ಅರ್ಧ ಕಿ.ಮೀ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ.

ಚಂದ್ಕೂರು ದೇವಸ್ಥಾನಕ್ಕೆ ಹತ್ತಿರದ ರಸ್ತೆ : ಕನ್ನಡಿಗ ಪ್ರಧಾನಿ ಹೆಚ್.ಡಿ ದೇವೇಗೌಡ ರವರು ಲೋಕಾಕಲ್ಯಾಣಾರ್ಥಕ್ಕಾಗಿ 1996 ರಲ್ಲಿ ಯಾಗ ನಡೆಸಿದ ಇತಿಹಾಸದ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ಕೂರು ಇಲ್ಲಿಗೆ ಬೆಳ್ತಂಗಡಿಯಿಂದ ಅತಿ ಹತ್ತಿರದ ರಸ್ತೆ ಇದಾಗಿದೆ. ಆದರೂ ಈ ರಸ್ತೆ ಇನ್ನೂ ದುರಸ್ತಿಗೊಳ್ಳದಿರುವುದು ದುರಂತವೇ ಸರಿ. ಸರ್ಕಾರಗಳು ಬಜೆಟ್ ನಲ್ಲಿ ದಲಿತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಮೀಸಲಿಟ್ಟರೂ ಅದು ಅಭಿವೃದ್ಧಿಗಾಗಿ ಬಳಕೆಯಾಗುವುದಿಲ್ಲ. ಪ್ರತಿ ವರ್ಷವೂ ಬಜೆಟ್ ನಲ್ಲಿಟ್ಟ ಅನುದಾನದಲ್ಲಿ 65% ರಿಂದ 70% ಮಾತ್ರ ಖರ್ಚು ಆಗುತ್ತಿದ್ದರೂ ಇನ್ನುಳಿದ ಅನುದಾನವನ್ನು ಇಂತಹ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ ಮಾಡಬೇಕು ಎಂಬುದು ಜನರು ಆಗ್ರಹಿಸಿದ್ದಾರೆ.

ಸರ್ಕಾರಗಳು ದಲಿತರ ಅಭಿವೃದ್ಧಿ ಬಗ್ಗೆ ಕೇವಲ ಬೊಗಳೆ ಮಾತ್ರ ಬಿಡುತ್ತಿದ್ದು, ವಾಸ್ತವವಾಗಿ ದಲಿತ ಕಾಲನಿಗಳು ಸೇರಿದಂತೆ ದಲಿತ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶಗಳು ಇಂದಿಗೂ ಅಭಿವೃದ್ಧಿ ವಂಚಿತಗೊಂಡಿದೆ. ಬಜೆಟ್ ನಲ್ಲಿ ಮೀಸಲಿಡುವ ಅನುದಾನಗಳು ದಲಿತರ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ. ಇದು ವಾಸ್ತವ ಸತ್ಯ. ಇದು ಬದಲಾಗಿ ದಲಿತ ಸಮುದಾಯಗಳ ನಿಜವಾದ ಅಭಿವೃದ್ಧಿಯಾಗಬೇಕು. ತಾಲೂಕು ಕೇಂದ್ರದಿಂದ ಒಂದು ಕಿ.ಮೀ ದೂರದಲ್ಲಿರುವ ಈ ರಸ್ತೆಯ ಪರಿಸ್ಥಿತಿ ಈ ರೀತಿಯಾದರೆ ಇನ್ನುಳಿದ ರಸ್ತೆಗಳ ಪರಿಸ್ಥಿತಿ ಯಾವ ರೀತಿ ಇರಬಹುದು ಎಂದು ಯೋಚಿಸುವಂತಾಗಿದೆ ಎಂದು ಲಾಯಿಲಬೈಲು ಎಲ್.ಹರೀಶ್ ಕುಮಾರ್ ತಿಳಿಸಿದ್ದಾರೆ.


