ಬೆಳ್ತಂಗಡಿ: ಉಜಿರೆ–ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ಸಹ ಸವಾರ ಮೃತಪಟ್ಟಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಾ. 28ರಂದು ನಡೆದಿದೆ.

ಮೃತಪಟ್ಟವರನ್ನು ಲಾಯಿಲ ಗ್ರಾಮದ ಅಮ್ಮಣ್ಣಂಗಡಿ ನಿವಾಸಿ ಚಂದ್ರಶೇಖರ್ ಅವರ ಪುತ್ರ ನಿತೇಶ್ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸವಾರನನ್ನು ಪುತ್ತೂರು ನಿವಾಸಿ ಲಿಖಿತ್ (20) ಎಂದು ತಿಳಿದುಬಂದಿದೆ.

ಮಾ. 28ರಂದು ತಡರಾತ್ರಿ ಸುಮಾರು 12:30ರ ವೇಳೆಗೆ ಕಾರ್ಯಕ್ರಮವೊಂದನ್ನು ಮುಗಿಸಿ ಹಿಂತಿರುಗುತ್ತಿದ್ದ ವೇಳೆ, ಉಜಿರೆ–ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯ ಪಂಚಮಿ ಲಾಡ್ಜ್ ಎದುರು ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದ ಪರಿಣಾಮ ಸಹ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



