ಬಂಟ್ವಾಳ: ಸಜೀಪ ಮುನ್ನೂರಿನ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಸಜೀಪ ಮಾಗಣೆತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಪುಣ್ಯಾಹ ಗಣಯಾಗ, ಪವಮಾನ ಸೂಕ್ತಾಭಿಷೇಕ, ಫಲಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಾಗದೇವರಿಗೆ ಸಯ ಸಾಸ್ತರ, ಭಜನಾ ಕಾರ್ಯಕ್ರಮ, ಅನ್ನದಾನ, ಸಾಮೂಹಿಕ ಸತ್ಯನಾರಾಯಣ ಕಥಾ ಪೂಜೆ ಹಾಗೂ ಅಶ್ವತ್ಥಕಟ್ಟೆ ವೃಕ್ಷಪೂಜೆಯೂ ಜರುಗಿತು.
ಭರತನಾಟ್ಯ ಕಾರ್ಯಕ್ರಮ ಹಾಗೂ ದೇವರಿಗೆ ರಂಗಪೂಜೆಯೊಂದಿಗೆ ಉತ್ಸವ ಸಂಪನ್ನವಾಯಿತು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ದೇವಳಕ್ಕೆ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸೋಲಾರ್ ದೀಪವನ್ನು ಉದ್ಘಾಟಿಸಲಾಯಿತು.

ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇವಳದ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾಭವನದ ವಿಜ್ಞಾಪನಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಗಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಶ್ರೀತಾಯ, ಅರ್ಚಕ ಕೃಷ್ಣ ಭಟ್, ಎನ್.ಕೆ. ಶಿವ, ಹರಿಪ್ರಸಾದ್ ಭಂಡಾರಿ, ರಾಜು ಪೂಜಾರಿ, ಶ್ರೀನಿವಾಸ್ ನಾಯಕ್, ರವೀಂದ್ರ ಕಂಬಳಿ, ದೇವಿಪ್ರಸಾದ್ ಪೂಂಜಾ, ವೆಂಕಟೇಶ್ವರ ಭಟ್, ದಾಸುಬ್ರಾಯ ಹೊಳ್ಳ, ಶಿವರಾಮ ಮೈಯ್ಯ, ಸುಬ್ರಾಯ ಕಾರಂತ, ನಾರಾಯಣ ಭಟ್, ಧನೇಶ್ವರ ರಾವ್, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.







