ಬಂಟ್ವಾಳ: ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಬೈದರ್ಕಳ ಜಾತ್ರೆಯು ಜ. 31ರಂದು ಜರುಗಲಿದೆ.
ಜ. 28ರಂದು ಸಂಜೆ 4.30ಕ್ಕೆ ಬಾಲೇಶ್ವರ ಗರಡಿಯಲ್ಲಿ ಅಂಕಚೆಂಡು ನಡೆಯಲಿದೆ. ರಾತ್ರಿ 10.00 ಗಂಟೆಗೆ ಪಂಜಿಕಲ್ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡಲಿದೆ. ಅದೇ ವೇಳೆ ಕೇಲ್ದೋಡಿಗುತ್ತು ಕೋಟಿ ಪೂಜಾರಿಯವರ ಮನೆಯಿಂದ ಬ್ರಹ್ಮಬೈದರ್ಕಳ ಭಂಡಾರ ಬಂದು, ಪಂಜಿಕಲ್ ಗುತ್ತಿನ ಬಳಿ ಕೊಡಮಣಿತ್ತಾಯ ದೈವವನ್ನು ಇದಿರುಗೊಂಡು ಬಿರುದಾವಳಿಯೊಂದಿಗೆ ಭಂಡಾರವು ಬಾಲೇಶ್ವರ ಗರಡಿಗೆ ಪ್ರವೇಶಿಸಲಿದೆ.

ಇದೇ ದಿನ ರಾತ್ರಿ 7.00 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8.00 ಗಂಟೆಗೆ ತಾಂಬೂಲ ಕಲಾವಿದೆರ್, ಪುಂಜಾಲಕಟ್ಟೆ–ಕುಡ್ಲ ಇವರಿಂದ “ಎಲ್ಲೆ ದಾದ ಏರೆಗ್ ಗೊತ್ತು?” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಬಳಿಕ ರಾತ್ರಿ 4.30ಕ್ಕೆ ನವಕ ಪ್ರಧಾನ ಕಲಶ, ಧ್ವಜಾರೋಹಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಜ. 29ರಂದು ಮಧ್ಯಾಹ್ನ 3.00 ಗಂಟೆಗೆ ಭಕ್ತಾದಿಗಳ ಸಂಕ್ರಾಂತಿ ಸೇವೆ ಪ್ರಾರಂಭವಾಗಲಿದೆ. ಸಂಜೆ 4.30ಕ್ಕೆ ಅಂಕಚೆಂಡು, ರಾತ್ರಿ 7.00 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.00 ಗಂಟೆಗೆ ಕೇಲ್ದೋಡಿಗುತ್ತಿನಿಂದ ದೈವದ ಭಂಡಾರ ಆಗಮಿಸಿ, ರಾತ್ರಿ 11.00 ಗಂಟೆಗೆ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ ಹಾಗೂ ಸರ್ವಬಲಿ ನಡೆಯಲಿದೆ. ಮುಂಜಾನೆ 4.00 ಗಂಟೆಗೆ ದೈವದ ಭಂಡಾರವು ಕೇಲ್ದೋಡಿಗುತ್ತಿಗೆ ವಾಪಾಸಾಗಲಿದೆ.

ಜ. 30ರಂದು ಸಂಜೆ 4.30ಕ್ಕೆ ಅಂಕಚೆಂಡು ನಡೆಯಲಿದೆ. ರಾತ್ರಿ 7.00 ಗಂಟೆಗೆ ಕೊಡಮಣಿತ್ತಾಯ ಬ್ರಹ್ಮಬೈದರ್ಕಳಿಗೆ ಗ್ರಾಮ ಸಂಕ್ರಾಂತಿ ಸೇವೆ ನಡೆಯಲಿದೆ. ರಾತ್ರಿ 9.00 ಗಂಟೆಗೆ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚಾಮೃತಾಭಿಷೇಕ ಜರುಗಲಿದೆ. ರಾತ್ರಿ 10.00 ಗಂಟೆಗೆ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ, ಬ್ರಹ್ಮಬಲಿ ಹಾಗೂ ಇರುಳು ದೈವಗಳಿಗೆ ನೇಮ ನಡೆಯಲಿದೆ.

ಜ. 31ರಂದು ಸಂಜೆ 8.30ಕ್ಕೆ ಬ್ರಹ್ಮಬೈದರ್ಕಳು ಒಲಿ ಮರೆಯಿಂದ ಹೊರಟು, ರಾತ್ರಿ 10.30ಕ್ಕೆ ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯಲಿದ್ದಾರೆ. ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12.00 ಗಂಟೆಗೆ ಕೊಡಮಣಿತ್ತಾಯ–ಬ್ರಹ್ಮಬೈದರ್ಕಳ ಕಡಸಾಲೆ ಬಲಿ, ಬಾಕಿಮಾರಿಗೆ ಸೂರ್ಯ ಕೊಡುವುದು ನಡೆಯಲಿದೆ. ಮುಂಜಾನೆ 2.00 ಗಂಟೆಗೆ ಬ್ರಹ್ಮರ ಬಲಿ, 4.00 ಗಂಟೆಗೆ ಬೈದರ್ಕಳ ಪಾತ್ರಿಗಳ ದರ್ಶನ ಹಾಗೂ ಸೂರ್ಯ ಹಾಕಿಕೊಳ್ಳುವುದು ನಡೆಯಲಿದೆ. ಬೆಳಿಗ್ಗೆ 5.00 ಗಂಟೆಗೆ ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಆಗಮಿಸಿ ದರ್ಶನ ನೀಡಿ ಸೂರ್ಯ ಹಾಕಿಕೊಳ್ಳಲಿದ್ದಾರೆ. ಬಳಿಕ ಮಾಯಾಂದಾತಿ ದೇವಿಯ ಉತ್ಸವ ಹಾಗೂ ಧ್ವಜ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಮಾಪ್ತಿಯಾಗಲಿದೆ.


