ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಗೇಟ್ ಹತ್ತಿರ ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಬದಿಯ ಬಳಿ ಸಿಕ್ಕ ಗಂಡು ಮಗುವಿನ ಪೋಷಕರ ಪತ್ತೆಗಾಗಿ ನೆರವಾಗುವಂತೆ ಮಾಧ್ಯಮಗಳ ಮೂಲಕ ಮಕ್ಕಳ ಕಲ್ಯಾಣ ಸಮಿತಿಯು ಸಾರ್ವಜನಿಕರಿಗೆ ಮನವಿ ಮಾಡಿದೆ.

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಹೊಳೆಹೊನ್ನೂರು ಠಾಣೆ ಪೊಲೀಸರು ಆ ಮಗುವನ್ನು ರಕ್ಷಣೆ ಮಾಡಿದ್ದರು. ಬಳಿಕ ಡಿ.16 ರಂದು ಪೋಷಕರ ಪತ್ತೆಗಾಗಿ ದೂರು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಮಗುವನ್ನು ಒಪ್ಪಿಸಲಾಗಿತ್ತು.

ಮಗುವಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಪೋಷಕರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಮಾಹಿತಿ ದೊರಕಿದಲ್ಲಿ ಶಿವಮೊಗ್ಗದ ಆಲ್ಕೋಳದಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರ ದೂರವಾಣಿ ಸಂಖ್ಯೆ : 08182 – 295511 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಜನವರಿ 10 ರಂದು ಮಗುವಿನ ಭಾವಚಿತ್ರದೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.




