ವಿಟ್ಲ: ಲಕ್ಕಿ ಡ್ರಾದಲ್ಲಿ ಲಭಿಸಿದ ನಗದು ಬಹುಮಾನವನ್ನು ವ್ಯಕ್ತಿಯೊಬ್ಬರು ಸಾರ್ವಜನಿಕ ಆಂಬ್ಯುಲೆನ್ಸ್ ಖರೀದಿಗೆ ದೇಣಿಗೆಯಾಗಿಸಿ ಇತರರಿಗೆ ಮಾದರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.
ದಿವಿನ್ ಪುಣಿಚಿತ್ತಾಯರ ಬೈಲು ಎಂಬವರೇ ಈ ಮಾನವೀಯ ಹೃದಯ ವೈಶಾಲ್ಯವನ್ನು ಮೆರೆದ ವ್ಯಕ್ತಿಯಾಗಿದ್ದಾರೆ.

ಕ್ರಿಸ್ಮಸ್ ಆಚರಣೆಯ ಸಂದರ್ಭ ವಿಟ್ಲದ ಕಾಮಜಾಲು ಶಾಲೆಯಲ್ಲಿ ಕಾಮಜಾಲು ಫ್ರೆಂಡ್ಸ್ ಕ್ಲಬ್ ಎಂಬ ಮಾಣಿಲದ ಸಂಘಟನೆಯೊಂದು ಲಕ್ಕಿ ಡ್ರಾವನ್ನು ಆಯೋಜನೆ ಮಾಡಿತ್ತು. ಇದರಲ್ಲಿ ಯೋಜನೆಯ ಮೊದಲ ಡ್ರಾದ ಹತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ದಿವಿನ್ ಅವರು ಪಡೆದುಕೊಂಡಿದ್ದರು.

ಆದ್ರೆ ಈ ಬಹುಮಾನವನ್ನು ಅವರು ಯಾವುದೇ ವೈಯಕ್ತಿಕ ಉಪಯೋಗಕ್ಕೆ ಬಳಸದೇ, ಸಮಾಜದ ಹಿತದೃಷ್ಟಿಯಿಂದ ಹಾಗೂ ಮಾನವೀಯ ಸೇವಾಭಾವದಿಂದ ಮಾಣಿಲ ಗ್ರಾಮದ ಸಾರ್ವಜನಿಕರಿಗಾಗಿ ಆಂಬ್ಯುಲೆನ್ಸ್ ಖರೀದಿಗೆ ದೇಣಿಗೆಯಾಗಿ ನೀಡಿ ಆದರ್ಶರಾಗಿದ್ದಾರೆ. ದಿವಿನ್ ಅವರ ಮಾವನಾದ ನರ್ಸಪ್ಪ ಬಾಳೆಕಲ್ಲು, ಇವರು ಕೆಎಫ್ಸಿ ಮಾಣಿಲ ಸಂಘದ ಗೌರವಾನ್ವಿತ ಸದಸ್ಯರಾಗಿದ್ದು ಇವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವಾ ಕೈಂಕರ್ಯಕ್ಕೆ ವಿನಿಯೋಗಿಸಿದ್ದಾರೆ. ಇವರ ಈ ಸಮಾಜ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ಕುರಿತು ಕೆಎಫ್ಸಿ (ರಿ.) ಮಾಣಿಲ ಸಂಘಟನೆಯ ಮಾರ್ಗದರ್ಶಕ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮೆಚ್ಚುಗೆಯ ನುಡಿಗಳನ್ನಾಡಿದ್ದು ಈ ಉದಾತ್ತ ಕಾರ್ಯವು ನಮ್ಮ ಸಂಘದ ಮೌಲ್ಯಗಳನ್ನು ಪ್ರತಿಬಿಂಬಿಸುವುದರೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ.ಇಂತಹ ಸೇವಾಭಾವನೆ ಹೊಂದಿದ ಸದಸ್ಯರನ್ನು ಹೊಂದಿರುವುದು ನಮ್ಮ ಹೆಮ್ಮೆ ಎಂದಿದ್ದಾರೆ.



