ಬಂಟ್ವಾಳ: ಪತ್ರಕರ್ತೆ, ಕವಯಿತ್ರಿ ವಾಣಿ ರಘುನಾಥ್ ಮುಂಬೈ ಅವರು ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜ. 4 ರಂದು ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ಕ.ಸಾ.ಪ. ಕೇಂದ್ರ ಸಮಿತಿ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಂಭ್ರಮ -2026 ಕಾರ್ಯಕ್ರಮದಲ್ಲಿ ಕನ್ನಡ ರತ್ನ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಲೇಖಕಿ ವಾಣಿಯವರು ಆರಂಭದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಸಂಪಾದಕತ್ವದ ನಮ್ಮ ಬಂಟ್ವಾಳ ಪತ್ರಿಕೆಯ ಸುದ್ದಿ ಸಂಪಾದಕಿಯಾಗಿ ಬಿ.ಸಿ.ರೋಡಿನಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಪತ್ರಿಕೋದ್ಯಮ ಪದವಿ ಮುಗಿಸಿ ವಿಜಯ ಕರ್ನಾಟಕ ಮಂಗಳೂರು ಕಛೇರಿಯಲ್ಲಿ ಪತ್ರಕರ್ತೆಯಾಗಿದ್ದರು. ಮುಂಬೈಗೆ ತೆರಳಿದ ಇವರು ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿದ್ದು, ಪ್ರಸ್ತುತ ಕರ್ನಾಟಕ ಮಲ್ಲ ದಿನಪತ್ರಿಕೆಯ ಅಂಕರಣಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕವಯಿತ್ರಿಯಾಗಿ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರಿಗೆ ಕಾವ್ಯಶಿರೋಮಣಿ ಪ್ರಶಸ್ತಿ ಲಭಿಸಿದೆ. ಉತ್ತಮ ನಿರೂಪಕಿಯಾಗಿರುವ ಇವರಿಗೆ ಇತ್ತೀಚೆಗೆ ನಡೆದ ಇಂಟರ್ ನ್ಯಾಶನಲ್ ಹ್ಯೂಮನ್ ಡೆವಲಪ್ ಮೆಂಟ್ ಕೌನ್ಸಿಲ್ ಇದರ ವತಿಯಿಂದ ಎಚಿವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಮುಂಬೈಯ ಪ್ರತಿಷ್ಠಿತ ಮಹಿಳಾ ಸಾಹಿತ್ಯ ಸಂಘ, ತುಳು ಕೂಟದ ಸಂಘಟಕರಾಗಿದ್ದಾರೆ. ವಿರಾರ್ ಕರ್ನಾಟಕ ಸಂಸ್ಥೆಯ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಪುತ್ತೂರು ದೀಪಕ್ ಕುಮಾರ್ ಇವರ ಶಿಷ್ಯೆಯಾಗಿ ಭರತನಾಟ್ಯ ತರಬೇತಿಯನ್ನು ಪಡೆದಿರುವ ನಾಟಕ ಕಲಾವಿದೆ.
ಕಾರ್ಯಕ್ರಮದಲ್ಲಿ ಕನ್ನಡ ರತ್ನ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




