ಬೆಳ್ತಂಗಡಿ: ಇಂದಬೆಟ್ಟು ಚರ್ಚ್ ಹಾಲ್ ಸಭಾಂಗಣದಲ್ಲಿ ಮಾನ್ಯ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ರವರ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮವು ಡಿ. 8 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಲಿಂಗಾಂತ್ಯಾರು, ಬೆದ್ರಪಲ್ಕೆ, ಎರ್ಮಲ ಗಡಿ ಭಾಗದ ಜನರಿಗೆ ಹಕ್ಕು ಪತ್ರ ಸಿಗದೆ ಇರುವ ಬೇಡಿಕೆಯ ಬಗ್ಗೆ ಮಾನ್ಯ ಶಾಸಕರಾದ ಹರೀಶ್ ಪೂಂಜಾ ರವರ ಬಳಿ ಬೇಡಿಕೆಯನ್ನು ಮಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರಾದ ಹರೀಶ್ ಪೂಂಜಾ ರವರ ಸೂಚನೆಯಂತೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ T. N., ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ, ಹಾಗೂ ಗಸ್ತು ಅರಣ್ಯಪಾಲಕ ಪ್ರತಾಪ್ ಅವರು ಡಿ.11ರಂದು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು.

ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಗ್ರಾಮಸ್ಥರಾದ ವಿ.ಜೆ ದೇವಸಿ ಎರ್ಮಲ, ರಾಮ ಮೊಯಿಲಿ ಬಂಗಾಡಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




