ದಾವಣಗೆರೆ: ಚಿನ್ನದ ವ್ಯಾಪಾರಿಯೊಬ್ಬರಿಗೆ ದರೋಡೆ ನಡೆಸಿ ಬಂಗಾರವನ್ನು ಕಸಿದುಕೊಂಡ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪಿಎಸ್ಐ ಸೇರಿ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ .

ಬಂಧಿತರನ್ನು ಪಿಎಸ್ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್ ಅರ್ಕಸಾಲಿ ಸುಮಾರು 80 ಗ್ರಾಂ ಬಂಗಾರದ ಒಡವೆಗಳನ್ನು ತೆಗೆದುಕೊಂಡು ದಾವಣಗೆರೆಯ ಬಸ್ ನಿಲ್ದಾಣಕ್ಕೆ ಬಂದಿದ್ದರು.ಈ ವೇಳೆ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಸೇರಿ ವ್ಯಾಪಾರಿಗೆ ನಾವು ಐಜಿ ಸ್ಕ್ವಾಡ್ ಎಂದು ಹೇಳಿ ಪೊಲೀಸ್ ಐಡಿ ಕಾರ್ಡ್ ಹಾಗೂ ನಕಲಿ ಗನ್ ತೋರಿಸಿ ಹೆದರಿಸಿದ್ದರು. ನಂತರ ಅವರನ್ನು ಕಾರಿನಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ನಟನೆ ಮಾಡಿ ಠಾಣೆಯ ಒಳಗೆ ಕರೆದುಕೊಂಡು ಹೋಗದೇ ಆ ನಂತರ ವ್ಯಾಪಾರಿಯ ಬಳಿ ಇದ್ದ ಬಂಗಾರವನ್ನು ಕಸಿದುಕೊಂಡು ಆತನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು.

ಘಟನೆಯ ಬಗ್ಗೆ ವ್ಯಾಪಾರಿಯು ಕೆಟಿಜೆ ನಗರ ಪೊಲೀಸರು ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದರೋಡೆಗೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




