ಬಂಟ್ವಾಳ : ಕೇಂದ್ರ ಸರಕಾರ ಮತ್ತು ರಾಜ್ಯ ದಿಂದ ಸಬ್ಸಿಡಿ ಇರುವ ಹಲವಾರು ರೀತಿಯ ಸಾಲ ಸೌಲಭ್ಯಗಳು ಇವೆ. ಸಿಗುವ ಸಾಲದ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ಮರುಪಾವತಿಯನ್ನು ವ್ಯವಸ್ಥಿತವಾಗಿ ಮಾಡಿದರೆ ಬ್ಯಾಂಕ್ಗಳು ಕರೆದು ಮತ್ತೆ ಮತ್ತೆ ಸಾಲ ಕೊಡುತ್ತದೆ. ತಮ್ಮ ಬ್ಯಾಂಕ್ ಖಾತೆ ಎನ್ಪಿಎ ಮಾಡಲಿಕ್ಕೆ ಅವಕಾಶ ಮಾಡಬಾರದು. ಸಿಬಿಲ್ ವರದಿಯಿಂದ ಯಾವುದೇ ಸಾಲಗಾರನ ಸಂಪೂರ್ಣ ಮಾಹಿತಿ ಬರುತ್ತದೆ ಎಂದು ಕೆನರಾ ಬ್ಯಾಂಕಿನ ಸೀನಿಯರ್ ಮೆನೇಜರ್ ಪುರಂದರ ತಿಳಿಸಿದರು.

ಅವರು ಅ.26 ರಂದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ನಡೆದ ಯುವ ಪ್ರೇರಣೆ – 2025 ಬ್ಯಾಂಕಿಂಗ್ ಸಾಲ ಮತ್ತು ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಸರಕಾರದ ಯಾವುದೇ ಯೋಜನೆ ಜಾರಿಯಾಗಬೇಕಿದ್ದರೆ ಜನರು ಬ್ಯಾಂಕ್ ಖಾತೆ ಹೊಂದಿರಬೇಕು. 2014ರಲ್ಲಿ ಜನ್ಧನ್ ಖಾತೆಯಿಂದಾಗಿ ಸರಕಾರದಿಂದ ಬರುವ ಎಲ್ಲಾ ರೀತಿಯ ಯೋಜನೆಯ ಹಣ ಅವರ ಖಾತೆಗೆ ಬೀಳುತ್ತದೆ. ಆತ್ಮನಿರ್ಭರ್ ಭಾರತ್ ಯೋಜನೆಯಿಂದ ಸ್ವ ಉದ್ಯೋಗಿಗಳು ತುಂಬಾ ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.

ಉದ್ಯಮಿ ಗಂಗಾಧರ ಸೇರಾ ಅವರು ಮಾತನಾಡಿ ಯಾವುದೇ ಉದ್ಯಮ ಆರಂಭಿಸಲು ರುಡ್ ಸೆಟ್ ನಲ್ಲಿ ತರಬೇತಿಯನ್ನು ಪಡೆದರೆ ಉತ್ತಮ ಪ್ರಯೋಜನವಾಗುತ್ತದೆ. ಉದ್ಯಮಿಯಾಗುವವರು ತಮ್ಮ ನಿರ್ಮಾಣ ಮಾಡುವ ಸಂಸ್ಥೆಯಲ್ಲಿ ನಿರಂತರ ಶ್ರಮವಹಿಸಿ ದುಡಿದರೆ ಆ ಉದ್ಯಮ ಯಶಸ್ವಿಯಾಗಿ ನಡೆಯುತ್ತದೆ ಎಂದು ತಿಳಿಸಿದರು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲ್ಯಾನ್ ಸಂಚಯಗಿರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ಉಪಸ್ಥಿತರಿದ್ದರು.

ಮಹಿಳಾ ಘಟಕದ ಸದಸ್ಯೆಯರಾದ ನಳಿನಿ ರಮೇಶ್, ವಾರಿಜ ಚೇತನ್, ಮಾಲತಿ ಮಚ್ಚೇಂದ್ರ ಪ್ರಾರ್ಥಿಸಿದರು. ಜತೆಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ ಅತಿಥಿಗಳನ್ನು ಸ್ವಾಗತಿಸಿದರು. ಜತೆಕಾರ್ಯದರ್ಶಿ ಸತೀಶ್ ಸಂಪಾಜೆ ಧನ್ಯವಾದ ನೀಡಿದರು. ದಳಪತಿ ಜಯಂತ್ ಕುಲಾಲ್ ಅಗ್ರಬೈಲು ಗುತ್ತು ರಾಜೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು, ಸೇವಾದಳದ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯೆಯರು ಸಹಕರಿಸಿದ್ದರು.



