Breaking
24 Mar 2026, Tue

ನೂತನ ವಿದ್ಯಾಸಂಸ್ಥೆ “ಎಡ್ವೆಂಚರ್” ನಾಮಕರಣ ಹಾಗೂ ಲಾಂಛನ ಬಿಡುಗಡೆ, ಶಿಕ್ಷಣದಿಂದ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ: ಓಡಿಯೂರು ಶ್ರೀ

ಬಂಟ್ವಾಳ : ಸದಾಶಿವ ಶಿಕ್ಷಣ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ ನೂತನ ವಿದ್ಯಾಸಂಸ್ಥೆಯ ನಾಮಕರಣ ಹಾಗೂ ಲಾಂಛನ ಬಿಡುಗಡೆ ಸಮಾರಂಭವು ಬೆಂಜನಪದವು ಶುಭಲಕ್ಷ್ಮಿ ಸಭಾಂಗಣದಲ್ಲಿ ಅ. 22ರಂದು ನಡೆಯಿತು.

ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಇವರು ನೂತನ ವಿದ್ಯಾ ಸಂಸ್ಥೆಗೆ “ಎಡ್ವೆಂಚರ್” ಎನ್ನುವ ನಾಮಕರಣದೊಂದಿಗೆ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿದರು.

ಬಳಿಕ ಆಶೀರ್ವಾಚನ ನೀಡಿ ಮಾತನಾಡಿದ ಅವರು ಕ್ಷಣ ಕ್ಷಣ ಕಲಿಯುವುದೇ ಶಿಕ್ಷಣ. ಶಿಕ್ಷಣದಿಂದ ಮಾತ್ರ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ. ನೈತಿಕ ಮೌಲ್ಯ ತುಂಬಿದ ಶಿಕ್ಷಣದ ಅನಿವಾರ್ಯತೆಯಾಗಿದೆ. ಸಾತ್ವಿಕ ಸ್ವಭಾವ, ಅರ್ಪಣಾ ಮನೋಭಾವ,ಕಠಿಣ ಪರಿಶ್ರಮವಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದು ಅಮೃತ್ ರೈ ಯವರ ತಂಡ ತೊರಿಸಿಕೊಟ್ಟಿದ್ದಾರೆ. ಸಂಸ್ಥೆಯ ಆಶಯ ಸಾಕಾರವಾಗಲಿ. ನೂತನ ವಿದ್ಯಾಸಂಸ್ಥೆಗೆ ಉತ್ತಮ ಭವಿಷ್ಯವಿರಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿ ಮಾಜಿ ಸಚಿವ ಬಿ. ರಮಾನಾಥ ರೈಯವರು ನೂತನ ವಿದ್ಯಾಸಂಸ್ಥೆಯ ವೆಬ್ಸೈಟ್ ಗೆ ಚಾಲನೆ ನೀಡಿ ಸಂಸ್ಥೆಯ ಬ್ರೋಶರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಹಿಂದೆ ದುರ್ಬಲ ವರ್ಗದ ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಈಗ ಶಿಕ್ಷಣ ನಮ್ಮೆಲ್ಲರ ಹಕ್ಕು ಆಗಿದೆ. ನೂತನ ವಿದ್ಯಾ ಸಂಸ್ಥೆ ಎಲ್ಲಾ ಸವಲತ್ತುಗಳನ್ನೊಳಗೊಂಡ, ಸುಂದರ ವಿದ್ಯಾದಾನ ಮಾಡುವ ತಾಣವಾಗಿ ಅತಿ ಎತ್ತರಕ್ಕೆ ಏರಲಿ. ಸುಂದರ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಂಸ್ಥೆ ಪೂರಕವಾಗಲಿಎಂದು ಸಂಸ್ಥೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಸಿಗಲಿ ಎಂದರು.

ರಮಾನಾಥ ರೈ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ಸದಾಶಿವ ಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷ ಹಾಗೂ ನೂತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಮೃತ್ ಯು ರೈ ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ವಿದ್ಯಾ ಸಂಸ್ಥೆ ಅತ್ಯಾಧುನಿಕ ಶಿಕ್ಷಣಕ್ಕೆ ಪೂರಕವಾಗುವಂತಹ ಮತ್ತು ಸರ್ವ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಸೂರಿನಡಿ ತರಬೇತಿ ನೀಡುವ ಸೌಲಭ್ಯವಿದೆ ಎಂದು ಹೇಳಿದರು.

ವಿದ್ಯಾಸಂಸ್ಥೆಯ ನೂತನ ಪ್ರಾಂಶುಪಾಲರಾದ ಮಹೇಶ್ ಕೆ. ಎನ್. ಪುತ್ತೂರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಳ್ಳಿಗೆ ಗ್ರಾ. ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಸದಾಶಿವ ಪ್ರತಿಷ್ಠಾನದ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ, ಕೋಶಾಧಿಕಾರಿ ಅಶ್ವಥ್, ಟ್ರಸ್ಟಿ ಬಿ. ಮೋಹನ್ ಕುಮಾರ್ ಉಪಸ್ಥಿತರಿದ್ದರು.

ನೂತನ ವಿದ್ಯಾ ಸಂಸ್ಥೆಯ ವಿಶೇಷತೆಯನ್ನೋಳಗೊಂಡ ಸಂಪೂರ್ಣ ಮಾಹಿತಿಯನ್ನು ಎಲ್ ಇ ಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು

ಸದಾಶಿವ ಪ್ರತಿಷ್ಠಾನದ ಟ್ರಸ್ಟಿ ಸಮತಾ ಕೆ.ಜೆ ಸ್ವಾಗತಿಸಿ, ಟ್ರಸ್ಟಿ ದೀಪಿಕಾ ಸಂದೇಶ್ ಧನ್ಯವಾದವಿತ್ತರು, ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *